ಯಾದಗಿರಿ: ವಡಗೇರಾ ತಾಲ್ಲೂಕಿನ ಕೊಂಗಂಡಿ ಗ್ರಾಮದಲ್ಲಿರುವ ಪರಿಶಿಷ್ಟರಿಗೆ ಸೇರಿದ ಕುಡಿಯವ ನೀರಿನ ಬಾವಿ ಮುಚ್ಚಲಾಗಿದೆ ಎಂದು ಆರೋಪಿಸಿದ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ) ಜಿಲ್ಲಾ ಮುಖಂಡರು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಯೊಬ್ಬರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಗ್ರಾಮದ ಸರ್ವೆ ನಂಬರ್ 12/6ರ 3 ಗುಂಟೆ ಜಮೀನಿನಲ್ಲಿ ಪರಿಶಿಷ್ಟರಿಗೆ ಕುಡಿಯುವ ನೀರಿನ ಬಳಕೆಯ ಬಾವಿ ಇತ್ತು. ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ ಬಾವಿ ಮುಚ್ಚದಂತೆ ಮನವಿ ಮಾಡಿದರೂ ಕೆಲವು ಖಾಸಗಿ ವ್ಯಕ್ತಿಗಳು ಕಿವಿಗೊಡಲಿಲ್ಲ ಎಂದು ಆರೋಪಿಸಿದ್ದಾರೆ.
ಬಾವಿಯನ್ನು ನೆಲಸಮ ಮಾಡಿ, ಮುಚ್ಚಿ ಹಾಕಿದ್ದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರಿ ಜಮೀನನ್ನು ಮಾರಾಟ ಮಾಡಿದವರು, ಖರೀದಿದಾರ ಹಾಗೂ ಸಂಬಂಧಪಟ್ಟ ಅಧಿಕಾರಿಯ ವಿರುದ್ಧವೂ ಕ್ರಮಜರುಗಿಸಬೇಕು. ಇಲ್ಲವಾದರೆ ವಡಗೇರಾ ಪೊಲೀಸ್ ಠಾಣೆ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದಿದ್ದಾರೆ.
ಈ ವೇಳೆ ಸಮಿತಿಯ ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ, ಅಜಿಜ್ ಸಾಬ್ ಐಕೂರು, ವೀರಭದ್ರಪ್ಪ ತಳವಾರಗೇರಾ, ಮಹಾದೇವಪ್ಪ ಬಿಜಾಸಪುರ, ಮಲ್ಲಿಕಾರ್ಜುನ ತಳ್ಳಳ್ಳಿ, ಮಲ್ಲಿಕಾರ್ಜುನ ಶಾಖಾನವರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.