ADVERTISEMENT

ಯಾದಗಿರಿ: ನ್ಯಾಯಾಧೀಶರು, ಅಧಿಕಾರಿಗಳಿಂದ ಸ್ವಚ್ಛತೆ ಜಾಗೃತಿ

ಯಿಮ್ಸ್‌ನಲ್ಲಿ ಸ್ವಚ್ಛತಾ ಶ್ರಮದಾನ; 360ಕ್ಕೂ ಅಧಿಕ ಜನರು ಭಾಗಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:10 IST
Last Updated 31 ಜನವರಿ 2026, 6:10 IST
ಯಾದಗಿರಿಯ ‘ಯಿಮ್ಸ್‌’ನಲ್ಲಿ ಶುಕ್ರವಾರ ನಡೆದ ಸ್ವಚ್ಛತಾ ಶ್ರಮದಾನದಲ್ಲಿ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ., ಎಸ್‌ಪಿ ಪೃಥ್ವಿಕ್ ಶಂಕರ್, ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ,  ಡಿವೈಎಸ್‌ಪಿ ಸುರೇಶ್ ನಾಯಕ್, ಪೌರಾಯುಕ್ತ ಉಮೇಶ್ ಚವ್ಹಾಣ್ ಸೇರಿ ಇತರರು ಉಪಸ್ಥಿತರಿದ್ದರು 
ಯಾದಗಿರಿಯ ‘ಯಿಮ್ಸ್‌’ನಲ್ಲಿ ಶುಕ್ರವಾರ ನಡೆದ ಸ್ವಚ್ಛತಾ ಶ್ರಮದಾನದಲ್ಲಿ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ., ಎಸ್‌ಪಿ ಪೃಥ್ವಿಕ್ ಶಂಕರ್, ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ,  ಡಿವೈಎಸ್‌ಪಿ ಸುರೇಶ್ ನಾಯಕ್, ಪೌರಾಯುಕ್ತ ಉಮೇಶ್ ಚವ್ಹಾಣ್ ಸೇರಿ ಇತರರು ಉಪಸ್ಥಿತರಿದ್ದರು    

ಯಾದಗಿರಿ: ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ನೈರ್ಮಲ್ಯ ಹಾಗೂ ಶುಚಿತ್ವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನ್ಯಾಯಾಧೀಶರು, ಅಧಿಕಾರಿಗಳು, ವಕೀಲರು, ಸಂಘ–ಸಂಸ್ಥೆಗಳ ವತಿಯಿಂದ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಯಿಮ್ಸ್‌) ಆವರಣದಲ್ಲಿ ಗುರುವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಅವರ ನೇತೃತ್ವದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.‌‌

ರಾಷ್ಟ್ರೀಯ ಸ್ವಚ್ಛತಾ ದಿನದ ಅಂಗವಾಗಿ ಆಸ್ಪತ್ರೆಯ ಒಳಗೆ, ಕಾರಿಡಾರ್, ಆಸ್ಪತ್ರೆ ಕಟ್ಟಡದ ಹಿಂಬದಿ, ಆವರಣ, ಮೆಡಿಕಲ್ ಕಾಲೇಜು ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು, ವಕೀಲರು, ಸ್ವಯಂ ಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು.

ಬೆಳ್ಳಂಬೆಳಿಗ್ಗೆ ಕಾಲಿನಲ್ಲಿ ಬೂಟು, ಕೈಗವಸು, ಮುಖಗವಸು, ತಲೆಯ ಮೇಲೆ ಟೋಪಿ ಧರಿಸಿ, ಪೊರಕೆ, ಬುಟ್ಟಿಗಳನ್ನು ಹಿಡಿದ ಅಧಿಕಾರಿಗಳು ಹಾಗೂ ಸ್ವಯಂಸೇವಕರ ದಂಡು ಆಸ್ಪತ್ರೆಯ ಆವರಣಕ್ಕೆ ಇಳಿಯಿತು. ಕಸ ಕಂಡೊಡನೆ ಬುಟ್ಟಿ, ಚೀಲಗಳಿಗೆ ಹಾಕಿಕೊಂಡರು. 

ADVERTISEMENT

ಆಸ್ಪತ್ರೆಯ ಹಿಂಬದಿಯ ಕಿಟಕಿ, ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಜಾಗದಲ್ಲಿ ಬಿದ್ದಿದ್ದ ಒಂದು ಬಾರಿ ಬಳಸಿ ಬಿಸಾಡುವ ಕಾಗದದ ತಟ್ಟೆಗಳು, ಟೀ ಗ್ಲಾಸ್, ಗುಟಕಾ ಪ್ಯಾಕೇಟ್, ನೀರಿನ ಬಾಟಲ್, ಎಳನೀರಿನ ಚಿಪ್ಪು, ಪ್ಲಾಸ್ಟಿಕ್ ಕವರ್, ಮರದ ಒಣಗಿದ ಕಟ್ಟಿಗೆಯಂತಹ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವನ್ನಾಗಿ ಪ್ರತ್ಯೇಕವಾಗಿ ಬೇರ್ಪಡಿಸಿದರು. ತಾವು ತಂದಿದ್ದ ಚೀಲಗಳಲ್ಲಿ ತುಂಬಿಕೊಂಡರು. ಇಡೀ ಕಾಲೇಜಿನ ಕ್ಯಾಂಪಸ್ ಹಾಗೂ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಒಂದು ಗಂಟೆಕಾಲ ಸ್ವಚ್ಛತಾ ಕೈಂಕರ್ಯ ನಡೆಸಿದರು. 

ಸಂಗ್ರಹಿಸಲಾದ ಕಸವನ್ನು ನಗರಸಭೆಯ ಸ್ವಚ್ಛತಾ ಕಾರ್ಮಿಕರು ಸಂಗ್ರಹಿಸಿದ ತ್ಯಾಜ್ಯವನ್ನು ವಾಹನಗಳಲ್ಲಿ ತುಂಬಿಕೊಂಡರು. 360ಕ್ಕೂ ಹೆಚ್ಚು ಮಂದಿಯ ಶ್ರಮದಿಂದಾಗಿ ಆಸ್ಪತ್ರೆಯ ಆವರಣದಲ್ಲಿ ಬಿದ್ದಿದ್ದ ಸುಮಾರು 1 ಟನ್ ತ್ಯಾಜ್ಯಕ್ಕೆ ಮುಕ್ತಿ ಸಿಕ್ಕಿತ್ತು. 

ಶ್ರಮದಾನದಲ್ಲಿ ನ್ಯಾಯಾಂಗ ಇಲಾಖೆಯ 80 ಜನ ಸಿಬ್ಬಂದಿ, ಪೊಲೀಸ್ ಇಲಾಖೆಯ 60 ಜನ ಸಿಬ್ಬಂದಿ, 40 ಜನ ವಕೀಲರು, ಆರೋಗ್ಯ ಇಲಾಖೆಯ 30 ಜನ, ಗೃಹ ರಕ್ಷಕ ದಳದ 90 ಜನ, ತಲಾ 30 ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ಘಟಕದ ಸೇರಿದಂತೆ ನೂರಾರು ಜನರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಯಿಮ್ಸ್‌, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘ, ಗೃಹರಕ್ಷಕ ದಳ, ಎನ್‌ಎಸ್‌ಎಸ್ ಘಟಕ ಸೇರಿ ಇತರರ ಸಹಯೋಗದಲ್ಲಿ ಶ್ರಮದಾನ ಜರುಗಿತು. 

ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್, ‘ಯಿಮ್ಸ್’ ಮುಖ್ಯಸ್ಥ ಡಾ.ಸಂದೀಪ್ ಹರಸಂಗಿ, ಡಿಎಸ್‌ಪಿ ಸುರೇಶ ನಾಯಕ, ಪಿಎಸ್‌ಐ ಮಂಜನಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಯಾದಗಿರಿಯ ‘ಯಿಮ್ಸ್‌’ನಲ್ಲಿ ಶುಕ್ರವಾರ ನಡೆದ ಸ್ವಚ್ಛತಾ ಶ್ರಮದಾನ ಅಂಗವಾಗಿ ತ್ಯಾಜ್ಯ ಸಂಗ್ರಹಿಸಿದ ಅಧಿಕಾರಿಗಳು

‘ಶುಚಿತ್ವವಿದ್ದರೆ ಸ್ವಾಸ್ಥ್ಯ’

‘ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿ ಇದ್ದರೆ ಆರೋಗ್ಯವೂ ಸ್ವಾಸ್ಥ್ಯವಾಗಿ ಇರುತ್ತದೆ. ಹೀಗಾಗಿ ಆರೋಗ್ಯ ಕೇಂದ್ರಗಳ ಸುತ್ತಲೂ ಶುಚಿತ್ವ ಇರಿಸಿಕೊಳ್ಳುವುದು ಮುಖ್ಯ’ ಎಂದು ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹೇಳಿದರು.

ಶ್ರಮದಾನಕ್ಕೆ ಚಾಲನೆ ನೀಡಿ ತಾವೂ ಪಾಲ್ಗೊಂಡು ಮಾತನಾಡಿದ ಅವರು ‘ಮನೆಯ ಸ್ವಚ್ಛತೆಗಿಂತ ಆಸ್ಪತ್ರೆಯ ಸ್ವಚ್ಛತೆ ಬಹಳ ಮುಖ್ಯವಾಗಿದೆ. ಆರೋಗ್ಯ ಕಾಪಾಡುವಂತಹ ಆಸ್ಪತ್ರೆಯ ಸ್ವಚ್ಛತೆಗಾಗಿ ಪ್ರತಿಯೊಬ್ಬರು ಕೈಜೋಡಿಸಿ ಸಂಸ್ಥೆಗೆ ಸಹಕಾರ ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.