ಯಾದಗಿರಿ: ‘ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಲು ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಮುಖ್ಯ ಪಾತ್ರವಹಿಸುತ್ತವೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವಿಶ್ ಒರಡಿಯಾ ಹೇಳಿದರು.
ನಗರದ ಕೋಲಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಗೆ ಸಿಎಸ್ಆರ್ ಅನುದಾನದಲ್ಲಿ ಶುಕ್ರವಾರ ಐಡಿಬಿಐ ಬ್ಯಾಂಕ್ ವತಿಯಿಂದ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಶಾಲಾ ವಿದ್ಯಾರ್ಥಿಗಳು ಓದಿನ ಜೊತೆಗೆ ತಮ್ಮ ಆರೋಗ್ಯದ ಮೇಲೂ ಗಮನ ಕೊಡಬೇಕು. ಸ್ವಚ್ಛತೆ ಕಾಪಾಡುತ್ತಾ ಒಳ್ಳೆಯ ರೀತಿಯಲ್ಲಿ ಅಭ್ಯಸಿಸಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಕೀರ್ತಿ ತರುವ ಪ್ರಯತ್ನ ಮಾಡಬೇಕು. ಶುದ್ಧ ನೀರಿನ ಘಟಕದ ನೀರನ್ನು ಮಿತವಾಗಿ ಬಳಸಿ, ಅದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.
ಡಿಡಿಪಿಐ ಚನ್ನಬಸಪ್ಪ ಮುಧೋಳ ಮಾತನಾಡಿ, ‘ಶಾಲೆಯ 430 ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರಿನ ಘಟಕದ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಅದರ ಸಂರಕ್ಷಣೆಯ ಜವಾಬ್ದಾರಿಯೂ ಹೊಂದಿರಬೇಕು’ ಎಂದರು.
ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಮುಲು, ಮುಖ್ಯಶಿಕ್ಷಕ ಮರೆಪ್ಪ ಮ್ಯಾಗೇರಿ ಮಾತನಾಡಿದರು.
ಕ್ಷೇತ ಶಿಕ್ಷಣಧಿಕಾರಿ ವೀರಪ್ಪ ಕನ್ನಳ್ಳಿ, ಶಿಕ್ಷಣ ಸಂಯೋಜಕ ಕಿಶನ್ ಪವಾರ್, ನಾಗರಾಜ ಬೀರನೂರ, ಎಸ್ಡಿಎಂಸಿ ಅಧ್ಯಕ್ಷ ಜಗದೀಶ್, ಬ್ಯಾಂಕ್ ಸಿಬ್ಬಂದಿ ಶರಣು ಗೌಡ, ಅವಿನಾಶ್ ಮುಳ್ಳಗಸಿ, ಮೊಹಮದ್ ಗೌಸುದ್ದೀನ್ ಉಪಸ್ಥಿತರಿದ್ದರು. ಶೈಲಾ ಜ್ಯೋತಿ ನಿರೂಪಿಸಿ, ಗುರುನಾಥ್ ರೆಡ್ಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.