ADVERTISEMENT

ಯಾದಗಿರಿ‍: ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಥಾನ್

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 4:25 IST
Last Updated 15 ಜನವರಿ 2023, 4:25 IST
ಯೋಗಥಾನ್
ಯೋಗಥಾನ್   

ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 15 ರಂದು ಭಾನುವಾರ ಯೋಗಥಾನ್ ಕಾರ್ಯಕ್ರಮಕ್ಕೆ
ಶಾಸಕ ವೆಂಕಟರೆಡ್ಡಿ ಮುದ್ನಾಳ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಯೋಗ ಒಂದು ದಿನಕ್ಕೆ ಸೀಮಿತ ಮಾಡಬೇಡಿ. ಪ್ರತಿದಿನವೂ ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಯೋಗದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ ಎಂದರು.

ADVERTISEMENT

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಯೋಗಥಾನ್ ವಿಶ್ವದಾಖಲೆಯಾಗಿದೆ.‌ ರಾಜ್ಯದಲ್ಲಿ ಸುಮಾರು 11 ಲಕ್ಷಕ್ಕೂ ಹೆಚ್ಚು ಜನರಿಂದ ಯೋಗಥಾನ್ ನಡೆಯುತ್ತಿದೆ. ಕ್ರೀಡಾಂಗಣ ಭರ್ತಿಯಾಗಿದ್ದು, ಯಾದಗಿರಿ ಜನತೆ ಆರೋಗ್ಯದ ಮಹತ್ವ ಅರಿತುಕೊಂಡಿರುವುದು ಸಂತೋಷದ ಸಂಗತಿ ಎಂದರು‌.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಯೋಗ ಮಾಡುವುದರಿಂದ ದೇಹದ ಮೂಳೆಗಳು ಸೇರಿದಂತೆ ಅಂಗಾಂಗಗಳು ಆರೋಗ್ಯಯುತವಾಗಿರುತ್ತದೆ ಎಂದರು.

ಸುಮಾರು 6,000 ಹೆಚ್ಚು ಜನ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ಯೋಗ ಹಮ್ಮಿಕೊಳ್ಳಲಾಗಿತ್ತು.

ಕ್ರೀಡಾಂಗಣದ ನಾಲ್ಕು ಪ್ರದೇಶ ದ್ವಾರಗಳಲ್ಲಿ ಬ್ಯಾರಿಕೇಡ್, ಮೈದಾನದಲ್ಲಿ ಮ್ಯಾಟ್, ಕುಡಿಯುವ ನೀರು ವೇದಿಕೆ ನಿರ್ಮಾಣ ಮಾಡಲಾಗಿದೆ. ಮೈದಾನದಲ್ಲಿ ಬ್ಲಾಕ್‌ಗಳ ಸಿದ್ದಪಡಿಸುವಿಕೆ, ವಾಹನಗಳ ಪಾರ್ಕಿಂಗ್‌ಗೆ ನ್ಯೂನತೆ ಆಗದಂತೆ ವಿವಿಧ ಉಪಸಮಿತಿಗಳ ಜವಾಬ್ದಾರಿಗಳನ್ನು ರಚಿಸಲಾಗಿದೆ. ಆಂಬುಲೆನ್ಸ್, ,ಅಗ್ನಿಶಾಮಕ ವಾಹನ, ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರುದ್ರಗೌಡ ಪಾಟೀಲ,‌ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮರೇಶ ಆರ್ ನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಪ್ಪ ಕೋಟೆಪ್ಪಗೊಳ, ಉಪವಿಭಾಗಧಿಕಾರಿ ಶಾಲಂ ಹುಸೇನ್, ಯುವ ಜನ ಸೇವಾ ಹಾಗೂ ಕ್ರೀಡಾ ಸಬಲೀಕರಣ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಯೋಗಗುರುಗಳಾದ ಅನಿಲ್ ಗುರೂಜಿ, ಸೋಮನಾಥರೆಡ್ಡಿ ಎಲ್ಹೇರಿ, ಡಿಡಿಪಿಐ ಶೌಂತಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್, ಡಿಎಚ್ಒ ಡಾ.ಗುರುರಾಜ ಹಿರೇಗೌಡ ಸೇರಿದಂತೆ ಇನ್ನಿತರ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.