ಹುಣಸಗಿ: ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಯುವಕ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.
ವಜ್ಜಲ ಗ್ರಾಮದ ಯುವಕ ಮಹಾಂತೇಶ ಮಲ್ಲಣ್ಣ ಮಡಿವಾಳರ್ (35) ಮೃತರು.
ಗ್ರಾಮದ ಕೊಂಡಮ್ಮಾಯಿ ದೇವಸ್ಥಾನದ ಬಳಿ ಗ್ರಾಮದ ಕೆಲವರು ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹುಣಸಗಿ ಪಿಎಸ್ಐ ರಾಹುಲ್ ಪಾವಡೆ, ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದಾರೆ. ಆ ಸ್ಥಳದ ಸನಿಹದಲ್ಲಿಯೇ ಇದ್ದ ಮಹಾಂತೇಶ ಓಡಿ ಹೋಗುತ್ತಿದ್ದಾಗ ಮೃತ ಪಟ್ಟಿದ್ದಾರೆ.
ವಿಷಯ ತಿಳಿದು ಕುಟುಂಬಸ್ಥರು ಹಾಗೂ ಸಂಬಂಧಿಕರು ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಹುಣಸಗಿ ಸಿಪಿಐ ರವಿಕುಮಾರ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಕುಟುಂಬಸ್ಥರು ಪ್ರತಿಭಟನೆ ಕೈಬಿಡಲಿಲ್ಲ. ಆಗ ಶನಿವಾರ ರಾತ್ರಿ ಸ್ಥಳಕ್ಕೆ ಡಿವೈಎಸ್ಪಿ ಜಾವೇದ್ ಇನಾಮದಾರ ಆಗಮಿಸಿ ತಿಳಿಹೇಳಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.
ಶವವನ್ನು ಕುಟುಂಬಸ್ಥರು ಸುರಪುರ ತಾಲ್ಲೂಕಿನ ಮುಷ್ಟಳ್ಳಿ ಗ್ರಾಮಕ್ಕೆ ತೆಗೆದುಕೊಂಡು ಹೋದರು ಎಂದು ತಿಳಿದು ಬಂದಿದೆ.
ಈ ಕುರಿತು ಮೃತನ ಪತ್ನಿ ವಿಜಯಲಕ್ಷ್ಮಿ ನೀಡಿದ ದೂರಿನಂತೆ ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಜ್ಜಲ ಗ್ರಾಮದ ಕೊಂಡಮ್ಮ ದೇವಸ್ಥಾನದ ಬಳಿ ಜೂಜಾಟದಲ್ಲಿ ನಿರತರಾಗಿದ್ದ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ₹ 77,210 ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.