ನವದೆಹಲಿ (ಪಿಟಿಐ): 10ನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ಸಮೀಪಿಸುತ್ತಿರುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ನಡೆಸಲಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಒತ್ತಡಕ್ಕೆ ಒಳಗಾಗದೆ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎನ್ನುವ ಬಗ್ಗೆ ಈ ವೇಳೆ ಅವರು ‘ಮೌಲ್ಯಯುತ ಸಲಹೆಗಳನ್ನು’ ನೀಡಲಿದ್ದಾರೆ.‘ಕೃತಜ್ಞತೆಯ ಶ್ರೇಷ್ಠತೆ, ‘ನಮ್ಮ ಆಕಾಂಕ್ಷೆಗಳ ಮೇಲೆ ನಮ್ಮ ಭವಿಷ್ಯ’, ‘ಪರೀಕ್ಷೆಗಳ ಅವಲೋಕನ’, ‘ನಮ್ಮ ಕರ್ತವ್ಯಗಳು ನಿಮ್ಮ ಕೈಯಲ್ಲಿ’ ‘ಸಮಚಿತ್ತತೆಯ ಪ್ರಯೋಜನ’ ಎಂಬ ಐದು ವಿಷಯಗಳಲ್ಲಿ ಪ್ರಬಂಧ ಮಂಡಿಸಲು ವಿದ್ಯಾರ್ಥಿಗಳಿಗೆ ಆಹ್ವಾನಿಸಲಾಗಿತ್ತು.
‘ಉತ್ತಮವಾಗಿ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳನ್ನು ಪ್ರಧಾನಿಯೊಂದಿಗೆ ಸಂವಾದ ನಡೆಸಲು ಆಯ್ಕೆ ಮಾಡಲಾಗಿದೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.
ಈ ಬಾರಿಯ ಕಾರ್ಯಕ್ರಮವನ್ನು ಮೊದಲಿಗೆ ಜ.16ಕ್ಕೆ ನಿಗದಿಪಡಿಸಲಾಗಿತ್ತು.ಆದರೆ ವಿವಿಧ ಕಾರಣಗಳಿಂದ ಇದನ್ನು ಮುಂದೂಡಲಾಗಿತ್ತು.ದೆಹಲಿಯ ತಾಲ್ಕಟೊರಾದಲ್ಲಿ ಸಂವಾದ ನಡೆಯಲಿದ್ದು, ಸುಮಾರು 2 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಒಂದು ಲಕ್ಷದಷ್ಟು ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.