ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ನಿರಂಜನ ವಾನಳ್ಳಿ ಅವರು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡಿದ್ದಾರೆ.
ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ಥಾವರಚಂದ್ ಗೆಹಲೋತ್ ಅವರು ಮಂಗಳವಾರ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಅವರು ಮುಂದಿನ ನಾಲ್ಕು ವರ್ಷ ಅಥವಾ 67 ವರ್ಷ ವಯೋಮಿತಿ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೂ ಈ ಹುದ್ದೆಯಲ್ಲಿ ಇರಲಿದ್ದಾರೆ.
ಪ್ರೊ.ಟಿ.ಡಿ.ಕೆಂಪರಾಜು ಅವರು ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ 2017ರಲ್ಲಿ ಅಧಿಕಾರ ಸ್ವೀಕರಿಸಿದ್ದರು. 2021ರ ಜುಲೈನಲ್ಲಿ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು. ಬಳಿಕ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ಕುಮುದಾ ಅವರನ್ನು ಹಂಗಾಮಿ ಕುಲಪತಿಯನ್ನಾಗಿ ನೇಮಿಸಲಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ವಾನಳ್ಳಿಯಲ್ಲಿ ಜನಿಸಿದ ನಿರಂಜನ ಅವರು 30ಕ್ಕೂ ಹೆಚ್ಚು ಕೃತಿಗಳನ್ನೂ ಬರೆದಿದ್ದಾರೆ. ‘ಸುದ್ದಿಯಷ್ಟೇ ಅಲ್ಲ’, ‘ಪ್ರೀತಿಗೆಷ್ಟು ಮುಖಗಳು’, ‘ಮೊಗೆದಷ್ಟೂ ನೆನಪುಗಳು’, ‘ಹುಡುಕಾಟದ ಹೊತ್ತು’, ‘ಒಮಾನ್ ಎಂಬ ಒಗಟು’, ‘ಎಲ್ಲರಿಗೂ ಬೇಕು ಸಂವಹನ ಕೌಶಲ’, ‘ಚೌ ಚೌ ಬಾತ್’ ಇವರು ಬರೆದಿರುವ ಪ್ರಮುಖ ಪುಸ್ತಕಗಳಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.