ಸವದತ್ತಿ : ಇಲ್ಲಿನ ಆದರ್ಶ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿ ಸುಮಿತ ಸದಾಶಿವ ಪೋತದಾರ ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಜೊತೆ ನಡೆಸಿದ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾನೆ.
ಈ ಕಾರ್ಯಕ್ರಮವನ್ನು ಶಾಲೆಯಲ್ಲಿ ಪ್ರೊಜೆಕ್ಟರ್ ಮೂಲಕ ದೊಡ್ಡ ಪರದೆಯ ಮೇಲೆ ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ವಿದ್ಯಾರ್ಥಿಗಳು ಅತ್ಯಂತ ಶ್ರದ್ಧೆಯಿಂದ ಆಲಿಸಿದರು.
ಟಿ.ವಿ ಪರದೆ ಮೇಲೆ ಸುಮಿತ ಕಂಡಾಗ ವಿದ್ಯಾರ್ಥಿಗಳು ಪುಳಕಿತರಾಗುತ್ತಿದ್ದರು. ‘ಹೋ..’ ಎಂದು ಸಣ್ಣದಾಗಿ ಕೂಗುತ್ತಿದ್ದರು. ಆತ ನಮ್ಮೆಲ್ಲರ ಪ್ರತಿನಿಧಿಯಾಗಿ ಭಾಗಿಯಾಗಿದ್ದಾನೆ. ಆತ ನಮ್ಮ ಶಾಲೆಗೆ ಹೆಮ್ಮೆ ತಂದಿದ್ದಾನೆ ಎಂದು ಸ್ನೇಹಿತ ವಿದ್ಯಾರ್ಥಿಗಳು ಕೊಂಡಾಡಿದರು.
ಶಾಲೆಯ ಮುಖ್ಯೋಪಾಧ್ಯಾಯ ಬಿ.ಎನ್ ಬ್ಯಾಳಿ ಮಾತನಾಡಿ, ‘ಸುಮಿತ ಆದರ್ಶ ವಿದ್ಯಾರ್ಥಿಯಾಗಿದ್ದಾನೆ. ವಿಭಾಗ ಮಟ್ಟದ ಹ್ಯಾಂಡಬಾಲ್ ಸ್ಪರ್ಧೆಯಲ್ಲೂ ಭಾಗವಹಿಸಿದ್ದಾನೆ. ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ’ ಎಂದು ಪ್ರಶಂಶಿಸಿದರು.
ತಂದೆ ಸದಾಶಿವ ಮಾತನಾಡಿ, ‘ಸುಮಿತ ಸದಾ ಕ್ರೀಯಾಶೀಲನಾಗಿರುತ್ತಾನೆ. ಎಲ್ಲರೊಂದಿಗೆ ಸದಾ ನಗುತ್ತ ಗೌರವದಿಂದ ಮಾತನಾಡಿಸುವ ವ್ಯಕ್ತಿತ್ವ ಹೊಂದಿದ್ದಾನೆ. ಆರ್.ಎಸ್.ಎಸ್ ಸ್ವಯಂ ಸೇವಕನಾಗಿದ್ದಾನೆ’ ಎಂದರು.
ಸುಮಿತ ಜೊತೆಗೆ ಆತನ ತಾಯಿ ಮೀನಾಕ್ಷಿ ಪೋತದಾರ ಹಾಗೂ ಶಿಕ್ಷಕಿ ರುಕ್ಮಿಣಿಬಾಯಿ ಕಳ್ಳಿಮನಿ ದೆಹಲಿಗೆ ಹೋಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.