ADVERTISEMENT

ಅದೃಶ್ಯ ಅಂಗವೈಕಲ್ಯ ಶೈಕ್ಷಣಿಕ ಹಿನ್ನಡೆ

ಡಾ.ಶಿವಾನಂದ ಬಿ.ಹಿರೇಮಠ
Published 5 ಜುಲೈ 2019, 19:45 IST
Last Updated 5 ಜುಲೈ 2019, 19:45 IST
ಓದಿನ ಸಮಸ್ಯೆ
ಓದಿನ ಸಮಸ್ಯೆ   

ಕಬಡ್ಡಿ ಆಟದಲ್ಲಿ ಚಾಂಪಿಯನ್ ಆಗಿದ್ದ ಅಲೋಕ ಐದನೇ ತರಗತಿಯಲ್ಲಿ ಓದುತ್ತಿದ್ದ. ನಾಲ್ಕನೇ ತರಗತಿಯಲ್ಲಿ ಎರಡು ಬಾರಿ ಅನುತ್ತೀರ್ಣನಾದ ನಂತರ ಶಿಕ್ಷಕರೇ ಅವನನ್ನು, ಮುಂದಿನ ತರಗತಿಗೆ ಎತ್ತಿ ಹಾಕಿದ್ದರು. ಶಿಕ್ಷಕರು ಅವನ್ನು ದಡ್ಡ, ಸೋಂಬೇರಿ ಎಂದು ಯಾವಾಗಲೂ ಬೈಯುತ್ತಿದ್ದರು. ಓದಲೂ ಎಷ್ಟೇ ಪ್ರೋತ್ಸಾಹಿಸಿದರೂ, ಅಕ್ಷರ ಅಮರನ ತಲೆಗೆ ಹತ್ತುತ್ತಿಲ್ಲವಾದ್ದರಿಂದ, ಅವನ ತಂದೆ- ತಾಯಿ ಅವನನ್ನು ದನ ಕಾಯಲು ಕಳಿಸುವ ಯೋಚನೆಯಲ್ಲಿದ್ದರು. ಅಲೋಕ, ಹಲವಾರು ಬಾರಿ ಶಿಕ್ಷಕರು ಹಾಗೂ ಪಾಲಕರಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದ. ತನಗೆ ಅಕ್ಷರಗಳು ಅರ್ಥವಾಗುವುದಿಲ್ಲ. ಬರೆಯಲು ಗೊಂದಲವಾಗುತ್ತದೆ. ಅದಕ್ಕೆ ಪರಿಹಾರ ಸೂಚಿಸಿ ಎಂದು ಎಷ್ಟು ಬಾರಿ ಬೇಡಿಕೊಂಡರೂ, ಯಾರೊಬ್ಬರೂ ಆತನ ಗೋಳಿಗೆ ಸ್ಪಂದಿಸಲಿಲ್ಲ. ಬದಲಿಗೆ ಮೈಗಳ್ಳ, ದಡ್ಡ ಎಂಬ ಮಾತುಗಳನ್ನೇ ಆತ ಕೇಳಬೇಕಾಯಿತು. ಅತ್ತ ಓದಿದ್ದೂ ಅರ್ಥವಾಗದೇ, ಪದೇ ಪದೇ ಫೇಲ್ ಆಗಿ, ಎಲ್ಲರಿಂದ ಅವಮಾನಿತನಾಗುವುದರ ಬದಲು ಶಾಲೆ ಬಿಟ್ಟು ಬೇರೆನ್ನಾದರೂ ಮಾಡುವುದೇ ಲೇಸೆಂದು, ಶಿಕ್ಷಣಕ್ಕೆ ಎಳ್ಳು-ನೀರು ಬಿಟ್ಟನು. ನಮ್ಮ ದೇಶದಲ್ಲಿ ಅನೇಕ ಅಲೋಕನಂಥವರು, ಈ ಕಾರಣದಿಂದಲೇ ಶಾಲೆಯನ್ನು ಮಧ್ಯದಲ್ಲೇ ತೊರೆಯುತ್ತಿದ್ದಾರೆ.

ಶೈಕ್ಷಣಿಕ ಸಾಧನೆಯು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಗುವಿನ ಭವಿಷ್ಯದ ಮುಖಪುಟವೆಂದು ಪರಿಗಣಿಸಲ್ಪಡುತ್ತದೆ. ಶೈಕ್ಷಣಿಕ ಹಿನ್ನಡೆತ (Scholastic backwardness) ದ ಕಾರಣಗಳನ್ನು ಗುರುತಿಸಿ, ಪರಿಹಾರೋಪಾಯಗಳನ್ನು ಅನುಸರಿಸದಿದ್ದರೆ, ಅದು ಮಗುವಿನ ಜೀವನದುದ್ದಕ್ಕೂ ಪರಿಣಾಮ ಬೀರುತ್ತಲೇ ಇರುತ್ತದೆ.

ಮಗುವು ಬೆಳೆಯುತ್ತಿರುವಾಗ ಅನೇಕ ಜೀವನ ಕೌಶಲಗಳನ್ನು ಕಲಿಯುತ್ತ ಬೆಳೆಯುತ್ತದೆ. ಸ್ವಾಭಾವಿಕ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಜೊತೆಜೊತೆಗೆ, ಶಾಲೆ ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕೌಶಲಗಳನ್ನು ಕಲಿಯುತ್ತದೆ. ಆದರೆ ಶೈಕ್ಷಣಿಕ ಕೌಶಲಗಳಾದ ಓದು, ಬರಹ, ಶಬ್ದಗಳು, ಉಚ್ಛಾರ, ವ್ಯಾಕರಣ ಹಾಗೂ ಗಣಿತವನ್ನು ಮಗುವಿನ ವಯಸ್ಸು ಹಾಗೂ ಬುದ್ಧಿಮಟ್ಟಕ್ಕೆ ತಕ್ಕಂತೆ ಕಲಿಯದಿದ್ದರೆ ಅದನ್ನು ಶೈಕ್ಷಣಿಕ ಹಿನ್ನಡೆಎನ್ನುತ್ತೇವೆ.

ADVERTISEMENT

ತಮ್ಮ ಮಕ್ಕಳು ಶಾಲೆಯಲ್ಲಿ ಎಲ್ಲ ಮಕ್ಕಳಿಗಿಂತ, ಇಲ್ಲವೇ ಎಲ್ಲ ಮಕ್ಕಳಂತೆ ಮುಂಚೂಣಿಯಲ್ಲಿರಲಿ ಎಂಬುದು ಎಲ್ಲ ಪಾಲಕರ ಸಹಜವಾದ ನಿರೀಕ್ಷೆ. ಈ ನಿಟ್ಟಿನಲ್ಲಿ ಮಕ್ಕಳು ವಿಫಲರಾಗತೊಡಗಿದಾಗ, ಪಾಲಕರು ಸ್ವಾಭಾವಿಕವಾಗಿಯೇ ಚಿಂತೆಗೊಳಗಾಗುತ್ತಾರೆ. ಇದರಿಂದ ಮಕ್ಕಳನ್ನು ಹೆಚ್ಚಿನ ಸಮಯ ಅಧ್ಯಯನ ಮಾಡಲು ಒತ್ತಾಯಿಸಬಹುದು ಇಲ್ಲವೇ ಮನೆಪಾಠಕ್ಕೆ ಅವರನ್ನು ಕಳಿಸಬಹುದು. ಇನ್ನೂ ಕೆಲವು ಸಂದರ್ಭದಲ್ಲಿ, ಶಾಲೆಯನ್ನೇ ಬದಲಿಸಬಹುದು. ಇವೆಲ್ಲ ಪ್ರಯತ್ನಗಳನ್ನು ಮಾಡಿದ ಮೇಲೂ ಮಕ್ಕಳ ಶೈಕ್ಷಣಿಕ ಸಾಧನೆಯಲ್ಲಿ ಸುಧಾರಣೆ ಕಂಡುಬರದಿದ್ದರೆ, ಪಾಲಕರು ಮಕ್ಕಳನ್ನು ದೂಷಿಸಲಾರಂಭಿಸುತ್ತಾರೆ. ಹಿನ್ನಡೆಗೆ ಮಗುವಿನ ಆಲಸ್ಯ, ಅಸಡ್ಡೆ ಹಾಗೂ ಬೇಜವಾಬ್ದಾರಿಯೇ ಕಾರಣವೆಂದು ದೂಷಿಸಿ, ಕೆಲವೊಮ್ಮೆ ಶಿಕ್ಷೆಗೂ ಒಳಪಡಿಸಲಾಗುತ್ತದೆ. ಶಿಕ್ಷಿಸುವುದರಿಂದ ಚೆನ್ನಾಗಿ ಓದಬಹುದೆಂಬ ಮಿಥ್ಯ ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಆದರೆ ಶಿಕ್ಷೆಯಿಂದ ಇನ್ನಷ್ಟು ದುಷ್ಪರಿಣಾಮಗಳಾಗುವವೇ ಹೊರತು, ಯಾವುದೇ ಪ್ರಯೋಜನವಿಲ್ಲ. ಶೈಕ್ಷಣಿಕ ಹಿನ್ನಡೆತಕ್ಕೆ ಅನೇಕ ಕಾರಣಗಳಿವೆ.

ನಿರ್ದಿಷ್ಟವಾದ ಕಲಿಕೆಯ ಸಮಸ್ಯೆಗಳು
(Specific Learning Disability):

ಬೆಳವಣಿಗೆಯ ಸಮಯದಲ್ಲಿ ಕೆಲ ಮಕ್ಕಳಲ್ಲಿ ಓದಿನಲ್ಲಿ (Dyslexia), ಬರವಣಿಗೆಯಲ್ಲಿ (Dysgraphia)ಹಾಗೂ ಲೆಕ್ಕದಲ್ಲಿ (Dyscalculia) ನ್ಯೂನತೆ ಕಂಡು ಬರುತ್ತದೆ. ಅವರಿಗೆ ಸಾಂಪ್ರದಾಯಿಕ ಶಿಕ್ಷಣ, ಪ್ರೋತ್ಸಾಹ ಹಾಗೂ ಸಾಕಷ್ಟು ಅವಕಾಶಗಳನ್ನು ಒದಗಿಸಿದರೂ ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಸಮಾಜದಲ್ಲಿ ಡಿಸ್‌ಲೆಕ್ಸಿಯದ ಬಗ್ಗೆ ಅರಿವು ಕಡಿಮೆ ಇರುವುದರಿಂದ, ಈ ಸಮಸ್ಯೆಯು ಬೆಳಕಿಗೆ ಬಾರದೇ ಉಳಿಯುತ್ತದೆ. ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯು ಇಂತಹ ಮಕ್ಕಳಿಗೆ ವಿಶೇಷ ತರಬೇತಿಯನ್ನೇನೂ ಒದಗಿಸುದಿಲ್ಲ. ಈ ಸಮಸ್ಯೆಗಳಿಂದ ಮಕ್ಕಳು ಗೊಂದಲ, ಹಿಂಸೆಗಳನ್ನು ಅನುಭವಿಸಿ, ತಮ್ಮ ಹಾಗೂ ಪಾಲಕರ ಆಕಾಂಕ್ಷೆಗಳನ್ನು ಪೂರೈಸಲಾಗದೇ ಖಿನ್ನತೆಗೊಳಗಾಗಬಹುದು. ಇಲ್ಲವೇ ಶಾಲೆಯನ್ನು ಮಧ್ಯದಲ್ಲೇ ತೊರೆಯಬಹುದು. ಬಾಲಿವುಡ್‌ ನಟ ಆಮಿರ್‌ಖಾನ್‌ರ ತಾರೆ ಜಮೀನ್ ಪರ ಎಂಬ ಚಿತ್ರವು ಈ ವಿಷಯದ ಬಗ್ಗೆ ಬೆಳಕು ಚೆಲ್ಲಿ, ಸಾಕಷ್ಟು ಜನ ಪಾಲಕರನ್ನು ತಮ್ಮ ಮಕ್ಕಳ ಕಲಿಕಾ ನ್ಯೂನತೆಯ ಬಗ್ಗೆ ಕಾಳಜಿ ವಹಿಸುವಂತೆ ಮಾಡಿದೆ.

ಚಿತ್ತಚಂಚಲತೆ(Attention Deficit Hyperactivity Disorder):

ಚಿತ್ತ ಚಂಚಲತೆ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಮಿದುಳಿನ ಸಮಸ್ಯೆ. ಈ ಮಕ್ಕಳು ಒಂದೆಡೆ ಕೂಡುವುದಿಲ್ಲ. ಎಲ್ಲೆಂದರಲ್ಲಿ ಓಡಾಡುತ್ತಿರುತ್ತಾರೆ. ಗಮನ ಕೇಂದ್ರೀಕರಿಸಲಾಗುವುದಿಲ್ಲ. ಹೀಗಾಗಿ ಓದುವಾಗ, ಬರೆಯುವಾಗ ತಪ್ಪುಗಳನ್ನು ಮಾಡುತ್ತಾರೆ. ಓದಿನಲ್ಲಿ ಲಕ್ಷ್ಯವಿಡಲಾಗದ ಕಾರಣ, ನೆನಪಿಟ್ಟುಕೊಳ್ಳಲಾಗುವುದಿಲ್ಲ. ಹೀಗಾಗಿ ಶಿಕ್ಷಣದಲ್ಲಿ ಹಿಂದುಳಿಯುತ್ತಾರೆ. ಈ ಸಮಸ್ಯೆ ಸಾಮಾನ್ಯವಾಗಿದ್ದರೂ ಪಾಲಕರು ಅದನ್ನು ನಿರ್ಲಕ್ಷಿಸಿ, ಮಕ್ಕಳನ್ನೆ ದೂಷಿಸುವುದು, ಶಿಕ್ಷಿಸುವುದು ಮಾಡುತ್ತಾರೆ.

ನಿಧಾನವಾಗಿ ಕಲಿಯುವ ವಿದ್ಯಾರ್ಥಿಗಳು (Slow Learners):

ಬುದ್ಧಿಮಟ್ಟ (Intelligence Quotient- IQ) 70–89 ಇರುವ ವಿದ್ಯಾರ್ಥಿಗಳು ವಿಷಯಗಳನ್ನು ನಿಧಾನವಾಗಿ ಗ್ರಹಿಸುತ್ತಾರೆ. ಇವರು ಬುದ್ಧಿಮಾಂದ್ಯರಲ್ಲ. ಆದರೆ, ಇವರ ಕಲಿಕೆಯ ವಿಷಯಗಳನ್ನು ಗೃಹಿಸುವ, ನೆನಪಿಟ್ಟುಕೊಳ್ಳುವ ಹಾಗೂ ಗ್ರಹಿಸಿದ ವಿಷಯವನ್ನು ವಿಶ್ಲೇಷಿಸುವ ಕೌಶಲಗಳು ಕಡಿಮೆ ಇರುವುದರಿಂದ, ನಿಧಾನವಾಗಿ ಕಲಿಯುತ್ತಾರೆ. ಹೀಗಾಗಿ ಸಾಂಪ್ರದಾಯಿಕ ಶಿಕ್ಷಣದಲ್ಲಿ ಈ ಮಕ್ಕಳೂ ತೊಂದರೆ ಅನುಭವಿಸುವುದು ಸಾಮಾನ್ಯ.

ದೃಷ್ಟಿ ದೋಷ, ಶ್ರವಣ ದೋಷ, ಆಟಿಸಂ ಹಾಗೂ ನರಮಂಡಲದ ಇನ್ನಿತರ ತೊಂದರೆಗಳಿಂದಲೂ ಮಕ್ಕಳು ಹಿನ್ನಡೆ ಅನುಭವಿಸುತ್ತಾರೆ. ಆತಂಕ, ಖಿನ್ನತೆ, ಗೀಳುರೋಗ, ಅನಾರೋಗ್ಯಕರ ಪಾಲನೆ- ಪೋಷಣೆ, ಪಾಲಕರ ಮಧ್ಯೆ ವೈವಾಹಿಕ ಸಮಸ್ಯೆಗಳು ಹಾಗೂ ಇನ್ನಿತರ ಸಮಸ್ಯೆಗಳೂ ಸಹ ಮಕ್ಕಳ ಶೈಕ್ಷಣಿಕ ಹಿನ್ನಡೆತಕ್ಕೆ ಕಾರಣವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.