ADVERTISEMENT

ಚಿಂತನಶೀಲತೆಯಿಂದ ಆತಂಕ ದೂರ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಲವು ಸಲಹೆಗಳು

ಕೆ.ಎನ್.ಹೊಸ್ಮನಿ
Published 18 ಫೆಬ್ರುವರಿ 2019, 11:50 IST
Last Updated 18 ಫೆಬ್ರುವರಿ 2019, 11:50 IST
   

ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ಪಬ್ಲಿಕ್ ಪರೀಕ್ಷೆಯ ಅನುಭವ ಇದು. ಆತಂಕ ಸಹಜ, ಚಿಂತನಶೀಲತೆಯಿಂದ ಅದನ್ನು ದೂರವಾಗಿಸಿಕೊಳ್ಳಬೇಕು.

* ಪರೀಕ್ಷೆ ತುಂಬಾ ಸಮೀಪದಲ್ಲಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಸಂಪೂರ್ಣ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಬಳಸಿಕೊಳ್ಳಬೇಕಾಗುತ್ತದೆ

* ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ದೃಢವಾದ ಮನೋಬಲದಿಂದ ಮುನ್ನಡೆದರೆ ಯಾವುದನ್ನೇ ಆದರೂ ಸಾಧಿಸಬಹುದು

ADVERTISEMENT

* ವರ್ಷವಿಡೀ ಓದಿದ್ದನ್ನು ಮೂರು ತಾಸಿನಲ್ಲಿ ಬರೆಯುವ ಪರೀಕ್ಷೆಗೆ ಯಾವಾಗಲೋ ತಯಾರಿ ಮಾಡಿಕೊಂಡರಾಯಿತು ಎನ್ನುವ ಪ್ರವೃತ್ತಿಯು, ನಂತರ ಅವಸರದ ಓದಿಗೆ ತೊಡಗಿದಾಗ ಆತಂಕಕ್ಕೆ ಕಾರಣವಾಗುತ್ತದೆ

* ನಿರಂತರ ಅಭ್ಯಾಸದ ಮೂಲಕ ಪರೀಕ್ಷೆಯನ್ನು ಸಹಜವಾಗಿ ಸ್ವೀಕರಿಸಬೇಕು. ಓದಿದ ವಿಷಯಗಳನ್ನು ಸಹಪಾಠಿಗಳೊಂದಿಗೆ ಚರ್ಚಿಸಿ, ಮನನ ಮಾಡಿಕೊಳ್ಳಬೇಕು. ಗುಂಪು ಅಧ್ಯಯನ ಒಳಿತು

* ಕಠಿಣವೆನಿಸುವ ವಿಷಯಗಳ ಸಾರಾಂಶ ಟಿಪ್ಪಣಿ ಮಾಡಿಕೊಂಡು, ಆಗಾಗ ಮನನ ಮಾಡಿಕೊಳ್ಳುವ ಮೂಲಕ ಸುಲಭಗೊಳಿಸಿಕೊಳ್ಳಬೇಕು

* ಪಠ್ಯವನ್ನು ಸಣ್ಣ ಘಟಕಗಳನ್ನಾಗಿ ವಿಭಜಿಸಿಕೊ ಳ್ಳುವುದರಿಂದ ನೆನಪಿನಲ್ಲಿಟ್ಟು ಕೊಳ್ಳುವುದು ಸುಲಭ.

* ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವುದು ತುಂಬಾ ಸೂಕ್ತ. ಎಲ್ಲ ವಿಷಯಗಳಿಗೂ ಸಮಾನ ಆದ್ಯತೆ ಇರಲಿ.

***
ಸಮಯದ ಸದುಪಯೋಗ ಮಾಡಿಕೊಳ್ಳಿ
ವಿದ್ಯಾರ್ಥಿ ಜೀವನ ಸುಂದರ ಜೀವನ. ಬದುಕನ್ನು ಕಟ್ಟಿಕೊಳ್ಳಲು ವಿದ್ಯಾರ್ಥಿ ಜೀವನ ಕಲಿಸಿಕೊಡುತ್ತದೆ. ವಿದ್ಯಾರ್ಥಿಯಾದವನು ತನ್ನ ಕಲಿಕೆಯ ಮೂಲಕ ಸುಂದರ ಜೀವನವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿದಿನ ಆಯಾ ದಿನದ ಪಾಠವನ್ನು ಅಭ್ಯಾಸವನ್ನು ಮಾಡಿಕೊಳ್ಳಬೇಕು.

ಈಗ ಕೊನೆಯ ಹಂತದಲ್ಲಿ ಎಲ್ಲಾ ವಿಷಯಗಳ ಪುನರಾವರ್ತನೆ ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೋಡಿ ಅದಕ್ಕೆ ಸರಿಯಾದ ಉತ್ತರವನ್ನು ಹೇಳುವ, ಬರೆಯುವ ಪ್ರಯತ್ನ ಮಾಡಬೇಕು. ಹಿಂದೆ ಕಳೆದ ಸಮಯದ ಬಗ್ಗೆ ಚಿಂತಿಸಬಾರದು. ಮುಂದೆ ಇರುವ ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಚಿಂತನೆ ಒಳ್ಳೆಯದು. ವಿದ್ಯಾರ್ಥಿಗಳು ಈ ಸಮಯದಲ್ಲಿ ಓದಿನೊಂದಿಗೆ ಪರೀಕ್ಷೆಯನ್ನು ಚೆನ್ನಾಗಿ ಬೆರದು ಉತ್ತಮ ಅಂಕ ಪಡೆಯುತ್ತೇನೆ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು.

ಓದಿದ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಬಗ್ಗೆ ತನ್ನದೇ ಆದ ಪದ್ಧತಿ ಬೆಳೆಸಿಕೊಳ್ಳಬೇಕು. ಹೀಗೆ ಯಾವುದೇ ಆತಂಕ, ಗಾಬರಿ ಇಲ್ಲದೆ ಶಾಂತಚಿತ್ತದಿಂದ ಏಕಾಗ್ರತೆಯಿಂದ ಓದುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ಅದೃಷ್ಟ ದೇವತೆ ನಿಮಗೆ ಒಲಿದು ಬರಲಿ. ಜೀವನದಲ್ಲಿ ಗೆಲ್ಲಿರಿ.
–ರಾಮಕೃಷ್ಣ ಶಿರೂರು. ಕನ್ನಡ ಅಧ್ಯಾಪಕ ಹೋಲಿ ರೋಸರಿ ಪ್ರೌಢ ಶಾಲೆ ಮೂಡುಬಿದಿರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.