ಸುಂಟಿಕೊಪ್ಪ: ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷಕ್ಕಾಗಿ ಮತ ಕೇಳದೆ ನರೇಂದ್ರಮೋದಿಗೆ ಮತ ಹಾಕಿ ಎಂದು ಜನತಂತ್ರ ವ್ಯವಸ್ಥೆಗೆ ಅಪಮಾನ ಮಾಡುತ್ತಿದ್ದಾರೆ ಎಂದು ಮುಖಂಡ ಟಿ.ಪಿ.ರಮೇಶ್ ಹೇಳಿದರು.
ಕೊಡಗು ಜಿಲ್ಲಾ ಯೂತ್ ಕಾಂಗ್ರೆಸ್ ಮತ್ತು ಕೊಡಗು ಜಿಲ್ಲಾ ಜೆಡಿಎಸ್ ಇಲ್ಲಿನ ವಾಹನ ಚಾಲಕರ ಸಂಘದ ಮುಂಭಾಗದಲ್ಲಿ ಏರ್ಪಡಿಸಿದ್ದ ಪ್ರಚಾರ ಜಾಥಾದಲ್ಲಿ ಅವರು ಮಾತನಾಡಿದರು.
ಯುವಜನರಿಗೆ ಉದ್ಯೋಗ ಸೃಷ್ಟಿಸುವ ಆಸೆ ತೋರಿಸಿ ಮೋಸ ಮಾಡಿದ್ದಾರೆ. ರೈತರ, ಬೆಳೆಗಾರರ, ಕಾರ್ಮಿಕರ ಹಿತ ಕಾಪಾಡದ ನರೇಂದ್ರಮೋದಿ ಸರ್ಕಾರ ಸುಳ್ಳು ಪ್ರಚಾರದಿಂದ ಜನರನ್ನು ಮರಳು ಮಾಡುತ್ತಿದೆ ಎಂದರು.
ಐಟಿ ದಾಳಿ ಮೂಲಕ ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ನಾಯಕರ ಮೇಲೆ ಏಕೆ ದಾಳಿ ನಡೆಯುತ್ತಿಲ್ಲ ಎಂದು ದೂರಿದರು.
ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದ ನಿರಾಶ್ರಿತರಿಗೆ ಪರಿಹಾರ ಕೊಡುವಲ್ಲಿ ಕೇಂದ್ರ ವಿಫಲವಾಗಿದೆ. ಕೇರಳಕ್ಕೆ ಭೇಟಿ ನೀಡಿದ ಪ್ರಧಾನಿ ಕೊಡಗಿಗೆ ಯಾಕೆ ಭೇಟಿ ನೀಡಿಲ್ಲ ಎಂದು ಸಂಸದ ಸ್ಪಷ್ಟಪಡಿಸಬೇಕು ಎಂದರು.
ಸುಂಟಿಕೊಪ್ಪ ಮುಖಂಡ ಎಂ.ಎ.ವಸಂತ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ಎಲ್ಲ ವರ್ಗದವರ ಅಭಿವೃದ್ಧಿ ಕಂಡಿದೆ. ಜವಹರ್ ಲಾಲ್ ನೆಹರೂ, ಲಾಲ್ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಆಡಳಿದಲ್ಲಿ ದೇಶ ಪ್ರಗತಿ ಕಂಡಿದೆ. ನರೇಂದ್ರಮೋದಿ ಆಡಳಿತದಲ್ಲಿ ಪ್ರಚಾರದ ವೈಭವೀಕರಣವಾಗಿದೆ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮಂಜುನಾಥ್ ನಾಯಕ್, ಬಾಲಚಂದ್ರ ನಾಯಕ್, ಪಿ.ಎಫ್.ಸೆಬಾಸ್ಟಿಯನ್ ಮಾತನಾಡಿದರು. ಗ್ರಾ.ಪಂ. ಸದಸ್ಯ ರಜಾಕ್, ಶಿವಮ್ಮ ಮಹೇಶ್, ಸುಂಟಿಕೊಪ್ಪ ಯೂತ್ ಕಾಂಗ್ರೆಸ್ ಅಣ್ಣಾ ಶರೀಫ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಇಬ್ರಾಹಿಂ ಸೀದಿ, ಕೊಡಗು ಯೂತ್ ಕಾಂಗ್ರೆಸ್ ಅಧ್ಯಕ್ಷ ಹನೀಫ್, ನಾಸೀರ್ ಸೀದಿ, ಶಫಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.