ಹೊಸಪೇಟೆ: ಮಂಗಳವಾರವಷ್ಟೇ ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸಿರುವ ವೈ. ದೇವೇಂದ್ರಪ್ಪನವರು ಬುಧವಾರ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.
ತಾಲ್ಲೂಕಿನ ರಾಜಪುರದ ಕಣಿವೆರಾಯನ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದ ಅವರು, ಕಲ್ಲಹಳ್ಳಿ, ಕಾರಿಗನೂರು ಹಾಗೂ ಪಾಪಿನಾಯಕನಹಳ್ಳಿಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಮತ ಯಾಚಿಸಿದರು.
ಪಾಪಿನಾಯಕನಹಳ್ಳಿಯಲ್ಲಿ ಮೇಟಿ ಪಂಪಾಪತಿ ಸೇರಿದಂತೆ ಇತರೆ ಮುಖಂಡರ ಮನೆಗಳಿಗೆ ತೆರಳಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿ, ‘ನಾನು ಇತ್ತೀಚೆಗಷ್ಟೇ ಬಿಜೆಪಿಗೆ ಬಂದರೂ ನನ್ನ ಜತೆ ದೊಡ್ಡ ಕಾರ್ಯಕರ್ತರ ಪಡೆ ಇದೆ. ಅನೇಕ ಜನ ಮುಖಂಡರು ನನ್ನ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ನನಗೆ ಏಕಾಂಗಿ ಎಂಬ ಭಾವನೆಯೇ ಇಲ್ಲ’ ಎಂದು ಹೇಳಿದರು.
‘ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂಬುದು 130 ಕೋಟಿ ಜನರ ಬಯಕೆಯಾಗಿದೆ. ಹೀಗಾಗಿ ಖಂಡಿತವಾಗಿಯೂ ಜನ ಬಿಜೆಪಿ ಪರ ಮತ ಚಲಾಯಿಸುವ ಭರವಸೆ ಇದೆ’ ಎಂದು ತಿಳಿಸಿದರು.
‘ಬಳ್ಳಾರಿ ಜಿಲ್ಲೆ ಹಾಗೂ ಈ ದೇಶದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಕಳೆದ ಐದು ವರ್ಷಗಳಲ್ಲಿ ಮೋದಿಯವರು ಆ ಕೆಲಸ ಮಾಡಿದ್ದಾರೆ. ಮತ್ತೆ ಗೆದ್ದು ದೇಶವನ್ನು ಸಮರ್ಥವಾಗಿ ಮುನ್ನಡೆಸುವರು’ ಎಂದು ಭರವಸೆ ವ್ಯಕ್ತಪಡಿಸಿದರು.
ಮುಖಂಡ ಮೃತ್ಯುಂಜಯ ಜಿನಗಾ ಮಾತನಾಡಿ, ‘ಮೋದಿಯವರ ಕೆಲಸದಿಂದ ಭಾರತದ ಹಿರಿಮೆ ಹೆಚ್ಚಾಗಿದೆ. ಹೊರದೇಶಗಳಲ್ಲಿರುವ ಭಾರತೀಯರಿಗೆ ಹೆಚ್ಚಿನ ಗೌರವ ಸಿಗುತ್ತಿದೆ. ಅನೇಕ ಜನ ವಿದೇಶದಿಂದ ಭಾರತಕ್ಕೆ ಬಂದು ಮೋದಿಯವರ ಪರ ಪ್ರಚಾರ ಕೈಗೊಂಡಿದ್ದಾರೆ. ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಿ, ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಾಗಬೇಕು ಎಂಬುದು ಅವರ ಬಯಕೆ. ಹೀಗಾಗಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಮುಖಂಡರಾದ ಕಟಗಿ ರಾಮಕೃಷ್ಣ, ಗುಂಡಿ ರಾಘವೇಂದ್ರ, ಅನಂತ ಸ್ವಾಮಿ, ಚಂದ್ರಕಾಂತ ಕಾಮತ್, ಗುದ್ಲಿ ಪರಶುರಾಮ, ಶಂಕರ್ ಮೇಟಿ, ವೈ. ಯಮುನೇಶ, ಕಿಶೋರ್ ಪತ್ತಿಕೊಂಡ, ಬಸವರಾಜ ನಾಲತ್ವಾಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಧಾ ಚಂದ್ರಶೇಖರ್, ತಿಪ್ಪೇಸ್ವಾಮಿ, ರಾಮು, ಯು. ನೀಲಕಂಠಪ್ಪ, ಯು. ಪಂಪಾಪತಿ, ಮಲ್ಲಾರೆಡ್ಡೆಪ್ಪ, ಯೋಗಲಕ್ಷ್ಮಿ, ಮಂಜುಳಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.