ADVERTISEMENT

ಬಿಜೆಪಿ ಬಲಗೈ ಸಮುದಾಯಕ್ಕೆ ಅವಕಾಶ ನೀಡಿದೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 14:44 IST
Last Updated 9 ಏಪ್ರಿಲ್ 2019, 14:44 IST

ಕೋಲಾರ: ‘ಬಿಜೆಪಿಯು ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಲಗೈ ಸಮುದಾಯಕ್ಕೆ ಅವಕಾಶ
ಕಲ್ಪಿಸಿದೆ. ಹೀಗಾಗಿ ಬಲಗೈ ಸಮುದಾಯವು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರನ್ನು ಬೆಂಬಲಿಸುತ್ತದೆ’ ಎಂದು ರಾಜ್ಯ ಹೊಲೆಯರ ಬಲಗೈ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಣ್ಣ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಲಾರ ಕ್ಷೇತ್ರದಲ್ಲಿ ಬಲಗೈ ಸಮುದಾಯದ 4.70 ಲಕ್ಷ ಮತದಾರರಿದ್ದಾರೆ. ಸಮುದಾಯದ ಪ್ರತಿಯೊಬ್ಬರೂ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

‘1951ರಿಂದ ಈವರೆಗೆ ನಡೆದಿರುವ ಲೋಕಸಭಾ ಚುನಾವಣೆಗಳಲ್ಲಿ ಸಮುದಾಯದವರಿಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅವಕಾಶ ನೀಡಿರಲಿಲ್ಲ. ಬಿಜೆಪಿ ಈ ಬಾರಿ ಸಮುದಾಯದವರಿಗೆ ಟಿಕೆಟ್ ನೀಡಿದೆ. ಸಮುದಾಯ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಕೋರಿದರು.

ADVERTISEMENT

‘ತಮಿಳುನಾಡಿನಲ್ಲಿ ರಾಜೀವ್‌ ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ 1991ರಲ್ಲಿ ಮುನಿಯಪ್ಪ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದ ಅನುಕಂಪದ ಅಲೆಯಲ್ಲಿ ಗೆದ್ದರು. ಸತತ 7 ಬಾರಿ ಸಂಸದರಾದ ಅವರು ರಾಜ್ಯದ ಮೂಲೆ ಮೂಲೆಯಲ್ಲಿ ಸ್ವಂತಕ್ಕೆ ಆಸ್ತಿ ಮಾಡಿದರೇ ಹೊರತು ಕ್ಷೇತ್ರದ ಜನರಿಗೆ, ಏನೂ ಮಾಡಿಲ್ಲ’ ಎಂದು ದೂರಿದರು.

ಸಮುದಾಯ ನೆನಪಾಗಲಿಲ್ಲ: ‘ಮುನಿಯಪ್ಪ ವಿಧಾನಸಭಾ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರದಲ್ಲಿ ತಮ್ಮ ಮಗಳನ್ನು ಗೆಲ್ಲಿಸಿಕೊಂಡರು. ಆಗಲೂ ಅವರಿಗೆ ಬಲಗೈ ಸಮುದಾಯ ನೆನಪಾಗಲಿಲ್ಲ. ಆದರೆ, ಮುಳಬಾಗಿಲಿನಲ್ಲಿ ಬಲಗೈ ಸಮುದಾಯದ ನಾಗೇಶ್ ಅವರನ್ನು ಗೆಲ್ಲಿಸುವ ಮೂಲಕ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸಮುದಾಯಕ್ಕೆ ನ್ಯಾಯ ಒದಗಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ 5 ವರ್ಷದಲ್ಲಿ ಉತ್ತಮ ಆಡಳಿತ ನೀಡಿದ್ದು, ಅವರು ಮೊತ್ತೊಮ್ಮೆ ಪ್ರಧಾನಿಯಾಗಬೇಕು. ಕ್ಷೇತ್ರದಲ್ಲಿ ಈಗಾಗಲೇ ಮುನಿಯಪ್ಪ ಹಠಾವೋ ಕೋಲಾರ ಬಚಾವೋ ಆಂದೋಲನ ಆರಂಭವಾಗಿದೆ. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಚನ್ನಪ್ಪ, ಮಂಜುನಾಥ್, ನಾರಾಯಣಸ್ವಾಮಿ, ಎಸ್.ಆರ್.ನಾರಾಯಣಸ್ವಾಮಿ, ಕೃಷ್ಣ, ಮೂರ್ತಿ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.