ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇರುವ ಸೀರೆಗಳನ್ನು ಮಾರಾಟ ಮಾಡುತ್ತಿದ್ದಉದ್ಯಾವರದ ಜಯಲಕ್ಷ್ಮಿ ಟೆಕ್ಸ್ಟೈಲ್ ಮೇಲೆ ಮಂಗಳವಾರ ಚುನಾವಣಾಧಿಕಾರಿಗಳು ದಾಳಿ ನಡೆಸಿ ಹಲವು ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರ ಭಾವಚಿತ್ರವುಳ್ಳ ಸೀರೆಗಳನ್ನು ಟೋಕನ್ಗಳ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ ಎಂಬ ದೂರು ಬಂದಿತ್ತು. ಅದರಂತೆಕಾಪು ಕ್ಷೇತ್ರದ ಎಂಸಿಸಿ ಅಧಿಕಾರಿ ಅನಿತಾ ಭಾಸ್ಕರ್, ತಪಾಸಣಾ ತಂಡದ ಅಧಿಕಾರಿ ನಾಗರಾಜ್ ಅವರನ್ನೊಳಗೊಂಡ ಚುನಾವಣಾಧಿಕಾರಿಗಳ ತಂಡ ದಾಳಿ ನಡೆಸಿತು.
ಈ ಸಂದರ್ಭ ಅಂಗಡಿ ಮಾಲೀಕರು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಿಬ್ಬಂದಿಯನ್ನು ಅಧಿಕಾರಿಗಳ ಸುತ್ತ ನಿಲ್ಲಿಸಿ ತಪಾಸಣೆಗೆ ಅಡ್ಡಿಪಡಿಸಿದ್ದಾರೆ. ಬಳಿಕ, ಪೊಲೀಸ್ ಭದ್ರತೆಯಲ್ಲಿ ಮಧ್ಯರಾತ್ರಿವರೆಗೂ ಅಂಗಡಿಯನ್ನು ತಪಾಸಣೆ ಮಾಡಲಾಗಿದ್ದು, ಈ ಸಂದರ್ಭ ಮೋದಿ ಚಿತ್ರವುಳ್ಳ ಸೀರೆಗಳು ಪತ್ತೆಯಾಗಿದ್ದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಚುನಾವಣಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಜಯಲಕ್ಷ್ಮೀ ಟೆಕ್ಸ್ಟೈಲ್ಸ್ ಮಾಲೀಕ ವೀರೇಂದ್ರ ಹಾಗೂ ರವೀಂದ್ರ ಅವರ ವಿರುದ್ದ ಚುನಾವಣಾ ಕರ್ತವ್ಯಕ್ಕೆ ಅಡ್ಡಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಾಪು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.