ADVERTISEMENT

ಉತ್ತರ ಕನ್ನಡ: ಮೈತ್ರಿ ಅಭ್ಯರ್ಥಿ ಆಯ್ಕೆ ಅನಿವಾರ್ಯ:ಶಾಸಕ ಶಿವರಾಮ ಹೆಬ್ಬಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 12:01 IST
Last Updated 8 ಏಪ್ರಿಲ್ 2019, 12:01 IST
ಆನಂದ ಅಸ್ನೋಟಿಕರ್ ಅವರು ಶಾಸಕ ಶಿವರಾಮ ಹೆಬ್ಬಾರ ಜೊತೆಗೂಡಿ ಶಿರಸಿ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು
ಆನಂದ ಅಸ್ನೋಟಿಕರ್ ಅವರು ಶಾಸಕ ಶಿವರಾಮ ಹೆಬ್ಬಾರ ಜೊತೆಗೂಡಿ ಶಿರಸಿ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು   

ಶಿರಸಿ: ದೇಶದಲ್ಲಿ ಅಧಿಕಾರ ಬದಲಾವಣೆಗೆ ಬಿಜೆಪಿಯೇತರ ಅಭ್ಯರ್ಥಿಗಳ ಆಯ್ಕೆ ಅನಿವಾರ್ಯವಾಗಿದ್ದು, ರಾಜ್ಯದಲ್ಲಿ ದೋಸ್ತಿ ಸರ್ಕಾರದ ಅಭ್ಯರ್ಥಿ ಆಯ್ಕೆಯಾದಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲ್ಲೂಕಿನ ಬನವಾಸಿಯಲ್ಲಿ ಸೋಮವಾರ ನಡೆದ ಮೈತ್ರಿ ಪಕ್ಷ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.‘ ಜಾತಿ, ಧರ್ಮದ ರಾಜಕಾರಣದಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಲು ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ದೇಶದ ಪ್ರಧಾನ ಮಂತ್ರಿಯ ಮಾತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ತರಲು ಮೈತ್ರಿ ಸರ್ಕಾರದ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದರು.

‘ಸ್ವಾತಂತ್ರ್ಯಾನಂತರದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಿಲ್ಲದೇ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಇದು ನಮ್ಮ ಬಯಕೆಯಲ್ಲ. ರಾಷ್ಟ್ರದ ಹಿತದೃಷ್ಟಿಯಿಂದ, ಹಿರಿಯ ನಾಯಕರ ಆದೇಶದ ಮೇರೆಗೆ ನೋವನ್ನು ನುಂಗಿಕೊಂಡು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಶಿಸ್ತನ್ನು ಉಲ್ಲಂಘಿಸದೇ, ಅಸ್ನೋಟಿಕರ್ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಕರೆ ನೀಡಿದರು.

ADVERTISEMENT

ಆನಂದ ಅಸ್ನೋಟಿಕರ್ ಮಾತನಾಡಿ, ‘ಉತ್ತರ ಕನ್ನಡದ ಜನರು ಬದಲಾವಣೆ ಬಯಸಿದ್ದಾರೆ. ಸಂಸದರು ಮಾತು, ಅವರ ವರ್ತನೆ ನೋಡಿ ಜನರು ಬದಲಾವಣೆಗೆ ತೀರ್ಮಾನಿಸಿದ್ದಾರೆ. ಕೇವಲ ಧರ್ಮ, ಜಾತಿಯ ಆಧಾರದ ಮೇಲೆ ಅವರು ಮಾತನಾಡುತ್ತಾರೆ. ಐದು ವರ್ಷಗಳ ಅವಧಿಯಲ್ಲಿ ಕೊನೆಯ ಐದು ತಿಂಗಳು ಸಾರ್ವಜನಿಕರಿಗೆ ಮುಖ ತೋರಿಸುತ್ತಾರೆ. ಹಿಂದೂ ಎಂದು ಹೇಳಿಕೊಳ್ಳುವ ಹೆಗಡೆ ಅವರು, ಹಿಂದೂಗಳ ಮಕ್ಕಳಿಗೆ ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

ಸಭೆಯ ಪೂರ್ವದಲ್ಲಿ ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅಸ್ನೋಟಿಕರ್, ದೇವರಿಗೆ ಪೂಜೆ ಸಲ್ಲಿಸಿದರು. ಪ್ರಮುಖರಾದ ಭೀಮಣ್ಣ ನಾಯ್ಕ, ಬಿ.ಆರ್.ನಾಯ್ಕ, ಸಿ.ಎಫ್.ನಾಯ್ಕ, ಶ್ರೀಲತಾ ಕಾಳೇರಮನೆ, ಹಾಲಪ್ಪ ಜಕಲಣ್ಣನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.