ADVERTISEMENT

ಸಾಹಿತಿ – ರಾಜಕಾರಣಿ

ಜಿ.ಬಿ.ಹರೀಶ
Published 17 ಮಾರ್ಚ್ 2014, 9:08 IST
Last Updated 17 ಮಾರ್ಚ್ 2014, 9:08 IST
ಸಾಹಿತಿ – ರಾಜಕಾರಣಿ
ಸಾಹಿತಿ – ರಾಜಕಾರಣಿ   

ಹಲವು ಸಲ ಲೋಕಸಭೆಗೆ ಪ್ರವೇಶ ಪಡೆದವರು ನಮ್ಮಲ್ಲಿ ಅನೇಕರಿದ್ದಾರೆ. ಅವರಲ್ಲಿ ರಾಮಚಂದ್ರ ವೀರಪ್ಪ (ಬಿಜೆಪಿ), ಶಂಕರಾನಂದ (ಕಾಂಗ್ರೆಸ) ಸೇಠ್ ಗೋವಿಂದ­­ದಾಸ್ (ಕಾಂಗ್ರೆಸ್) ಕೆಲವರು. ಗಾಂಧಿ ಯುಗದ ಅಸಹ­ಕಾರ ಆಂದೋಲ­ನದಲ್ಲಿ ಭಾಗವಹಿಸಿದ್ದ ಗೋವಿಂದ ದಾಸ್, ಎಂಟು ವರ್ಷಗಳು ಜೈಲುವಾಸ ಅನುಭವಿ­­ಸಿದ್ದರು,  ಐದು ಬಾರಿ ಇವರನ್ನು ಬ್ರಿಟಿಷರು ಸೆರೆಮನೆಗೆ ಕಳು­ಹಿಸಿದ್ದರು.

ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ­ರಾಗಿದ್ದ ಇವರು ಅದೇ ಪ್ರದೇಶದ ಜಬ್ಬಲ್ ಪುರ­ದಿಂದ ಲೋಕಸಭೆಗೆ ಸ್ಪರ್ಧಿಸಿ ಐದು ಸಲ ವಿಜಯ ಗಳಿಸಿದ್ದರು. ಈ ವರ್ಷ­ಗಳೆಂದರೆ: ಮೊದಲನೇ ಲೋಕಸಭೆ: 1952–57; ಎರಡನೇ ಲೋಕಸಭೆ:­1957–62; ಮೂರನೇ ಲೋಕಸಭೆ: 1962–67; ನಾಲ್ಕನೇ ಲೋಕಸಭೆ: 1967–70.

ಹಿಂದಿ ರಾಷ್ಟ್ರ ಭಾಷೆಯಾಗ­ಬೇಕು ಎಂಬ ಆಂದೋಲನದಲ್ಲಿ ಸಕ್ರಿಯರಾಗಿದ್ದ ಇವರು ಎರಡು ಸಲ ಅಖಿಲ ಭಾರತ ಹಿಂದಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಪಾರ ಸಂಖ್ಯೆಯಲ್ಲಿ ಬರವಣಿಗೆ ಮಾಡುವುದರೊಂದಿಗೆ ಸಕ್ರಿಯ ರಾಜಕೀಯದಲ್ಲಿದ್ದ ಅಪ­ರೂಪದ ಸಂಸದ ಈ ಸೇಠ್ ಗೋವಿಂದ ದಾಸ್.
1951ರ ಮಹಾಚುನಾವಣೆಗೆ ಕಾಂಗ್ರೆಸ್ ಅಗಾಧವಾದ ತಯಾರಿ ಮಾಡಿತ್ತು. ಆಗ ಚುನಾವಣೆಗೆ ನಿಂತಿದ್ದ 12 ಪಕ್ಷಗಳಿಗೆ ಚುನಾವಣಾ ಆಯೋಗ ವಿವಿಧ ಚಿಹ್ನೆಗಳನ್ನು ನೀಡಿತ್ತು. ಅದರಲ್ಲಿ ಅಂದಿನ  ಕಾಂಗ್ರೆಸ್ ಪಕ್ಷಕ್ಕೆ ನೇಗಿಲು ಸಹಿತವಿರುವ ಎರಡು ಎತ್ತುಗಳನ್ನು ಚಿಹ್ನೆಯಾಗಿ ನೀಡಿತ್ತು. ಸ್ವತಃ ನೆಹರೂ ಲೋಕಸಭಾ ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿದ್ದರು. ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಗೋವಿಂದದಾಸ್, ಮಧ್ಯಪ್ರದೇಶದ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಕೂಡ ಇದ್ದರು.

1951ರ ಲೋಕ­ಸಭೆಯ 479 ಸ್ಥಾನ­ಗಳಲ್ಲಿ ಬಹುಮತ ಸಾಬೀತು ಮಾಡಲು 245 ಸ್ಥಾನಗಳನ್ನು ಗಳಿಸಬೇಕಿತ್ತು. ಇದರಲ್ಲಿ ಕಾಂಗ್ರೆಸ್ 364 ಕಡೆ ಕಾಂಗ್ರೆಸ್ ಗೆಲುವು ಸಾಧಿಸಿತು. ಸೇಠ್ ಗೋವಿಂದ­ದಾಸ್ ಅವರ ಪ್ರಾಂತದಿಂದ ಲೋಕ­ಸಭೆಗೆ 29 ಸದಸ್ಯರು ಆಯ್ಕೆ­ಯಾದರು. ಇಷ್ಟು ದೀರ್ಘ ಕಾಲ ಲೋಕ­ಸಭಾ ಸದಸ್ಯರಾಗಿದ್ದರೂ ಅವರು ಅವಿರತ ಬರವಣಿಗೆ ಮಾಡಿದರು. ಅವರ ಒಟ್ಟು ಪುಸ್ತಕಗಳ ಸಂಖ್ಯೆ 100ಕ್ಕಿಂತ ಹೆಚ್ಚಿ­ನದು.

ಇದ­ರಲ್ಲಿ ಪ್ರವಾಸ, ರಾಜಕೀಯ, ಆತ್ಮಕತೆಗಳು ಸೇರಿವೆ.  ಸ್ವತಃ ಸಾಹಿತಿಯಾಗಿದ್ದ ಅವರಿಗೆ ಮೈಥಿಲಿ ಶರಣ ಗುಪ್ತ, ಹರಿವಂಶ­ರಾಯ್ ಬಚ್ಚನ್, ಮಹಾದೇವಿ ವರ್ಮ ಮೊದಲಾದ ಹಿಂದಿ ಸಾಹಿತಿಗಳು ಆಪ್ತರಾಗಿದ್ದರು.

ಸೇಠ್ ಗೋವಿಂದ ದಾಸ್ ಅವರ ವಿಶೇಷತೆಯೆಂದರೆ ದೇಶದ ಹಿರಿಯ ನಾಯಕರನ್ನು ಸ್ವಕ್ಷೇತ್ರಕ್ಕೆ ಕರೆ­ತರುತ್ತಿದ್ದುದು. ಗೋವಿಂದದಾಸ್ ಅವರಿಗೆ ಜವಾಹರ­ಲಾಲ್‌ ನೆಹರೂ, ಮಹಾತ್ಮ ಗಾಂಧಿ, ಡಾ.ರಾಧಾಕೃಷ್ಣನ್, ಮೌಲಾನಾ ಅಬ್ದುಲ್ ಕಲಾಂ ಆಜಾದ್‌,ಝಕೀರ್ ಹುಸೇನ್,ಮೊರಾರ್ಜಿ ದೇಸಾಯಿ, ಇಂದಿರಾ ಗಾಂಧಿ ಅವರೊಡನೆ ಉತ್ತಮ ಸಂಬಂಧವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT