ವಡೋದರ(ಪಿಟಿಐ): ಭಿತ್ತಿಪತ್ರಕ್ಕೆ ಸಂಬಂಧಿಸಿ ವಡೋದರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧುಸೂದನ ಮಿಸ್ತ್ರಿ ಮತ್ತು ಬಿಜೆಪಿ ನಡುವಿನ ಕಾಳಗ ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
‘ವಡೋದರದಲ್ಲಿ ರಾಹುಲ್ ಗಾಂಧಿ ಮತ್ತು ಮಧುಸೂದನ ಮಿಸ್ತ್ರಿಯವರ ಬೃಹತ್ ಹೋರ್ಡಿಂಗ್ಗಳನ್ನು ಹಾಕಲಾಗಿದ್ದು, ಇದರ ಸಂಪೂರ್ಣ ವೆಚ್ಚವನ್ನು ಮಿಸ್ತ್ರಿಯವರ ಚುನಾವಣಾ ಖರ್ಚಿನಲ್ಲಿ ಸೇರಿಸಬೇಕು’ ಎಂದು ವಡೋದರ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸೌರಭ್ ಪಟೇಲ್ ಸೋಮವಾರ ಆಗ್ರಹಿಸಿದ್ದಾರೆ.
ಅನಂತರ ರಾಹುಲ್ ಗಾಂಧಿ ಫಲಕಗಳಲ್ಲಿ ಇದ್ದ ಮಿಸ್ತ್ರಿ ಅವರ ಭಾವಚಿತ್ರಕ್ಕೆ ಬಿಳಿ ಹಾಳೆಗಳನ್ನು ಅಂಟಿಸಲಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾವಚಿತ್ರವಿದ್ದ ಭಿತ್ತಿಪತ್ರವನ್ನು ಹರಿದು ಹಾಕಿದ್ದಕ್ಕಾಗಿ ಮಧುಸೂದನ ಮಿಸ್ತ್ರಿಯವರನ್ನು ಈಚೆಗೆ ಬಂಧಿಸಿ ಬಿಡುಗಡೆ ಮಾಡಲಾಗಿತ್ತು.
ವಡೋದರ ಮಹಾನಗರ ಪಾಲಿಕೆಗೆ ಸೇರಿದ ಜಾಹೀರಾತು ಕಿಯೊಸ್ಕ್ಗಳನ್ನು ರಾಜ್ಯ ಬಿಜೆಪಿ ಸರ್ಕಾರ ಮುಂಗಡವಾಗಿ ಕಾಯ್ದಿರಿಸಿದ್ದು ಎಲ್ಲೆಡೆ ಆ ಪಕ್ಷದ ಪ್ರಧಾನಿ ಅಭ್ಯರ್ಥಿಯ ಪೋಸ್ಟರ್ಗಳು ರಾರಾಜಿಸುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದ ಬಳಿಕ ರಾಜ್ಯದಲ್ಲಿ ಎರಡೂ ಪಕ್ಷಗಳ ನಡುವೆ ಭಿತ್ತಿಪತ್ರದ ವಿಷಯದಲ್ಲಿ ಸಮರ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.