ರಾಜಸ್ಥಾನದ ಬೀಕಾನೆರ್ ಲೋಕಸಭಾ ಕ್ಷೇತ್ರವು 2004 ರಿಂದಲೂ ಬಿಜೆಪಿಯ ಹಿಡಿತದಲ್ಲಿದೆ. ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾದ ಇಲ್ಲಿಂದ ಈ ಬಾರಿಯೂ ಕಮಲ ಪಕ್ಷವು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರನ್ನೇ ಕಣಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿ ಇವರು 6,57,743 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್ನ ಮದನ್ ಗೋಪಾಲ್ ಮೇಘವಾಲ್ ಅವರನ್ನು ಮಣಿಸಿದ್ದರು. ಈ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಸಂಸತ್ ಪ್ರವೇಶಿಸಿರುವ ಅರ್ಜುನ್ ರಾಮ್ ಅವರು ಸ್ಥಳೀಯವಾಗಿಯೂ ಸಾಕಷ್ಟು ಪ್ರಭಾವವಿರುವ ರಾಜಕಾರಣಿ. 70 ವರ್ಷದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಆರ್ಎಸ್ಎಸ್ ಹಿನ್ನೆಲೆಯ ಇವರು ಬಿಜೆಪಿಯ ಶಿಸ್ತಿನ ಸಿಪಾಯಿ ಎಂದೇ ಗುರುತಿಸಿಕೊಂಡಿದ್ದಾರೆ.
ಬೀಕಾನೆರ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿ ವಿರುದ್ಧ ಸೆಣಸಲು ಕಾಂಗ್ರೆಸ್, ಗೋವಿಂದ ರಾಮ್ ಮೇಘವಾಲ್ ಅವರನ್ನು ಅಖಾಡಕ್ಕಿಳಿಸಿದೆ. ರಾಜ್ಯ ಸಚಿವರಾಗಿ ಅನುಭವವಿರುವ ಗೋವಿಂದ ರಾಮ್ ಅವರು ಕೂಡ ಈ ಕ್ಷೇತ್ರದ ಮತದಾರರಿಗೆ ಚಿರಪರಿಚಿತರು. ಈ ಬಾರಿಯಾದರೂ ಬಿಜೆಪಿ ಅಭ್ಯರ್ಥಿಯ ಗೆಲುವಿನ ಓಟಕ್ಕೆ ಕಡಿವಾಣ ಹಾಕಬೇಕೆಂದು ಕಾಂಗ್ರೆಸ್, 62 ವರ್ಷದ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. 2009ರಲ್ಲಿ ಇದೇ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು, ಅರ್ಜುನ್ ರಾಮ್ ವಿರುದ್ಧ ಪರಾಭವಗೊಂಡಿದ್ದರು. ಅನಂತರ ಬಿಎಸ್ಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. ಪಕ್ಷದ ರಾಜಸ್ಥಾನ ಘಟಕದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಗೋವಿಂದ ರಾಮ್ ಅವರನ್ನು ಕಣಕ್ಕಿಳಿಸಿರುವುದರಿಂದ ಈ ಕ್ಷೇತ್ರವು ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.