ADVERTISEMENT

ತೃತೀಯ ರಂಗ: ಕಾಂಗ್ರೆಸ್‌ ಕಣ್ಣು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2014, 19:30 IST
Last Updated 26 ಏಪ್ರಿಲ್ 2014, 19:30 IST
ತೃತೀಯ ರಂಗ: ಕಾಂಗ್ರೆಸ್‌ ಕಣ್ಣು
ತೃತೀಯ ರಂಗ: ಕಾಂಗ್ರೆಸ್‌ ಕಣ್ಣು   

ಕೋಲ್ಕತ್ತ/ಫರೂಖಾಬಾದ್‌: (ಪಿಟಿಐ): ಇನ್ನೂ 194 ಕ್ಷೇತ್ರಗಳಿಗೆ ಚುನಾವಣೆ ಬಾಕಿ ಇರುವಂತೆಯೇ ಕಾಂಗ್ರೆಸ್‌ ಪಕ್ಷ ಶನಿವಾರ ತೃತೀಯ ರಂಗಕ್ಕೆ ಬೆಂಬಲ ನೀಡುವ ಸಾಧ್ಯತೆಯನ್ನು ತೇಲಿಬಿಟ್ಟಿದೆ.

ಬಿಜೆಪಿಯ ನರೇಂದ್ರ ಮೋದಿ ಅಧಿ­ಕಾರಕ್ಕೆ ಬರುವುದನ್ನು ಶತಾಯ­ಗತಾಯ ತಡೆಯಲು ಜಾತ್ಯತೀತ ನಿಲುವಿನ ಪಕ್ಷಗಳ ಜತೆ ಚುನಾ­ವಣೋತ್ತರ ಮೈತ್ರಿ ಮಾಡಿಕೊಳ್ಳುವ ಕುರಿತು ಅದು ಪರಿಶೀಲಿಸುತ್ತಿದೆ.

ಕೋಲ್ಕತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ, ಚುನಾವಣೆ ನಂತರ ಅನಿವಾರ್ಯವಾದಲ್ಲಿ ಪಕ್ಷದ ಜಾತ್ಯತೀತ ಚೌಕಟ್ಟನ್ನು ಗಮನದ­ಲ್ಲಿ­ಟ್ಟು­ಕೊಂಡು ಇತರ ಪಕ್ಷಗಳ ಜತೆ ಮೈತ್ರಿಗೆ ಮುಂದಾಗುವುದಾಗಿ ತಿಳಿಸಿದರು.

‘ಕಾಂಗ್ರೆಸ್‌ ಪಕ್ಷ ಯಾವಾಗಲೂ ಗೆಲ್ಲ­ಲೆಂದೇ ಹೋರಾಡುತ್ತದೆ, ಸ್ವಂತ ಬಲದ ಮೇಲೆ ಶ್ರಮಿಸುತ್ತದೆ. ಆದರೆ, ಚುನಾ­ವ­ಣೆಯ ನಂತರ ಸಂಖ್ಯೆ­ಗಳೇ ಮುಖ್ಯವಾ­ಗುತ್ತವೆ’ ಎಂದೂ ಸಿಂಘ್ವಿ ಹೇಳಿದರು.

ಚುನಾವಣಾ ಫಲಿತಾಂಶದ ನಂತರ ಅಗತ್ಯ ಬಿದ್ದರೆ ತೃತೀಯರಂಗಕ್ಕೆ ಕಾಂಗ್ರೆಸ್‌ ಬೆಂಬಲ ನೀಡಬೇಕು. ಇಲ್ಲವೇ ಸರ್ಕಾರ ರಚಿಸಲು ಅದರಿಂದ ಬೆಂಬಲ ಪಡೆಯಬೇಕು ಎಂದು ಕೇಂದ್ರ ಸಚಿವ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ.

‘ದೇವರ ಅಲೆಯೇ (ರಾಮಮಂದಿರ ನಿರ್ಮಾಣ ಆಂದೋಲನ) ಕಾಂಗ್ರೆಸ್‌ ಪಕ್ಷವನ್ನು ತಡೆಯಲು ಆಗಲಿಲ್ಲ ಎಂದ ಮೇಲೆ ಮೋದಿ ಅಲೆ ಏನು ಮಾಡೀತು?’ ಎಂದು ಪ್ರಶ್ನಿಸಿದರು.

‘ನರೇಂದ್ರ ಮೋದಿ ಅವರು ಬಿಜೆಪಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸು­ತ್ತಾರೆ ನೋಡುತ್ತಿರಿ’ ಎಂದರು.

ಪೂಜೆ, ದರ್ಶನ ಏಕಿಲ್ಲ?
ವಾರಾಣಸಿಯಲ್ಲಿ ಸ್ಪರ್ಧಿಸಲು ಗಂಗಾ ಮಾತೆಯೇ ಕರೆ ನೀಡಿದ್ದಳು ಎಂದು ಮೋದಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ನಾಮ­ಪತ್ರ ಸಲ್ಲಿಸುವಾಗ  ಅವರು ಏಕೆ ಗಂಗೆಯ ದರ್ಶನ ಪಡೆಯ­ಲಿಲ್ಲ, ಪೂಜೆ ಸಲ್ಲಿಸಲಿಲ್ಲ?
ಸಚಿವ ಸಲ್ಮಾನ್‌ ಖುರ್ಷಿದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.