ADVERTISEMENT

ಗೋವಾ ಸಿಎಂ ಜತೆ ಮಾತುಕತೆಗೆ ಸಿದ್ಧ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 12:36 IST
Last Updated 27 ಜನವರಿ 2018, 12:36 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು:  ಮಹದಾಯಿ ನದಿ ನೀರಿನ ವಿವಾದ ಬಗೆಹರಿಸುವ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಲು ನಾನು ಈಗಲೂ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನನ್ನ ಪತ್ರಕ್ಕೆ ಮೊದಲು ಗೋವಾ ಮುಖ್ಯಮಂತ್ರಿಯವರು ಉತ್ತರ ಕೊಡಲಿ. ಅವರು ಸಭೆ ಕರೆದರೆ, ಮಾತುಕತೆಗೆ ಸಿದ್ಧ ಎಂದು ಹೇಳಿದರೆ ಗೋವಾ ಕಾಂಗ್ರೆಸ್ಸಿಗರ ಜೊತೆ ನಾನು ಮಾತನಾಡುತ್ತೇನೆ.

ಮಹದಾಯಿ ವಿಚಾರದಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಪ್ರಧಾನಿಯವರ ಬಳಿಗೆ ನಿಯೋಗ ಹೋಗೋಣ, ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ, ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಅವರಲ್ಲಿ ಮನವಿ ಮಾಡೋಣ ಎಂದರೆ ಬಿಜೆಪಿಯವರು ಒಪ್ಪಲು ತಯಾರಿಲ್ಲ.

ADVERTISEMENT

ಸ್ವ ಪ್ರತಿಷ್ಠೆ ಬದಿಗೊತ್ತಿ ಗೋವಾ ಮುಖ್ಯಮಂತ್ರಿಯವರೊಂದಿಗೆ ಮಾತನಾಡಲು ನಾನು ತಯಾರಿದ್ದೇನೆ. ನಮಗೆ ಪ್ರತಿಷ್ಠೆಗಿಂತ ರಾಜ್ಯದ ರೈತರ ಹಿತ ಮುಖ್ಯ.

ಮಹದಾಯಿ ವಿಚಾರದ ಬಗ್ಗೆ ಚರ್ಚಿಸಲು ಸರ್ವಪಕ್ಷ ಮುಖಂಡರು ಹಾಗೂ ರೈತ ಮುಖಂಡರೊಂದಿಗೆ ಬರುತ್ತೇವೆ. ಸಮಯ ಕೊಡಿ ಎಂದು ಪ್ರಧಾನಿಯವರಿಗೆ ಪತ್ರ ಬರೆಯುತ್ತೇನೆ. ಸರ್ವಪಕ್ಷ ನಿಯೋಗದಲ್ಲಿ ಬಿಜೆಪಿ ನಾಯಕರೂ ಬರಲಿ. ವಿವಾದ ಬಗೆಹರಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದಿದ್ದಾರೆ ಸಿದ್ದರಾಮಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.