ಹಾಸನ: ‘ಸಮ್ಮಿಶ್ರ ಸರ್ಕಾರ ಜಿಲ್ಲೆಗೆ ಹಲವು ಯೋಜನೆ ನೀಡಿದರೆ, ಇದು ಹಾಸನ ಬಜೆಟ್ ಎನ್ನುವ ಬಿಜೆಪಿ ನಾಯಕರು, ಯಾವ ಮುಖ ಹೊತ್ತು ಮತ ಕೇಳುತ್ತಾರೋ ಗೊತ್ತಿಲ್ಲ’ ಎಂದು ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಜೆಟ್ನಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದರೆ, ಇದು ಹಾಸನ ಬಜೆಟ್ ಎನ್ನುವ ಬಿಜೆಪಿ ನಾಯಕರು, ಅಧಿಕಾರ ಇದ್ದಾಗ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ’ ಎಂದು ಕಾಲೆಳೆದರು.
‘ನಂಗೆ ನಿಂಬೆಹಣ್ಣು ನೀಡಲು ಬಂದರೆ ರೇವಣ್ಣ ಅವರನ್ನೇ ನುಂಗುತ್ತೇನೆ’ ಎಂಬ ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆಗೆ ಏಕವಚನದಲ್ಲೇ ಉತ್ತರ ಕೊಟ್ಟ ರೇವಣ್ಣ, ‘ಈಶ್ವರಪ್ಪನನ್ನು ನಮ್ಮೂರಿನ ಶಿವನೇ ನುಂಗುತ್ತಾನೆ. ಆತ ಬುಡುಬುಡುಕೆ ಇದ್ದ ಹಾಗೆ. ಇಂಥಹವರನ್ನು ಎಷ್ಟೋ ಜನರನ್ನು ನೋಡಿದ್ದೇನೆ. ಅವನಿಗೆ ಮಾನ, ಮರ್ಯಾದೆ ಇದ್ದರೆ ಯಡಿಯೂರಪ್ಪನ ಕಾಲಿಗೆ ಬೀಳಲಿ’ ಎಂದು ಗುಡುಗಿದರು.
ದೇವೇಗೌಡರು ಜಿಲ್ಲೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಹೀಗಾಗಿ 8 ವಿಧಾನಸಭಾ ಕ್ಷೇತ್ರಗಳ ಜನರು ಪ್ರಜ್ವಲ್ ಗೆಲ್ಲಿಸುವ ತೀರ್ಮಾನ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.