ಮುಂಬೈ:ಎನ್ಸಿಪಿಯ ಹಿರಿಯ ನಾಯಕ ಮತ್ತು ಮಾಜಿ ಸಂಸದ ರಂಜಿತ್ಸಿಂಹ ಮೋಹಿತೆ ಪಾಟೀಲ್ ಅವರು ಬಿಜೆಪಿ ಸೇರಿದ್ದಾರೆ. ಇದು ಎನ್ಸಿಪಿ ಮತ್ತು ಎನ್ಸಿಪಿ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ಗೆ ದೊಡ್ಡ ಹಿನ್ನಡೆ ಎನ್ನಲಾಗಿದೆ.
ಬುಧವಾರ ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಬಿಜೆಪಿ ಸೇರಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಪಕ್ಷದ ಧ್ವಜವನ್ನು ಹಸ್ತಾಂತರಿಸುವ ಮೂಲಕ ಮೋಹಿತೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ರಂಜಿತ್ಸಿಂಹ ಅವರ ತಂದೆ ವಿಜಯಸಿಂಹ ಮೋಹಿತೆ ಪಾಟೀಲ್ ಅವರುಮಹಾರಾಷ್ಟ್ರದ ಮಾಧಾ ಲೋಕಸಭಾ ಕ್ಷೇತ್ರದ ಸಂಸದ. ಈ ಹಿಂದೆ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ರಂಜಿತ್ಸಿಂಹ ಎನ್ಸಿಪಿಯಿಂದ ರಾಜ್ಯಸಭೆಗೂ ಆಯ್ಕೆಯಾಗಿದ್ದರು. ಅವರು ಮಾಧಾ ಕ್ಷೇತ್ರದಲ್ಲಿ ಭಾರಿ ಪ್ರಭಾವ ಹೊಂದಿದ್ದಾರೆ. ಪಕ್ಷದ ಹಿರಿಯ ನಾಯಕರ ನಡೆಯಿಂದ ತೀರಾ ಬೇಸರವಾಗಿದೆ. ಹೀಗಾಗಿ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಮಾಧಾ ಕ್ಷೇತ್ರದಿಂದ ರಂಜಿತ್ಸಿಂಹ ಅವರಿಗೆ ಟಿಕೆಟ್ ನೀಡಬೇಕು ಎಂದು ಅವರ ಕುಟುಂಬ ಹಟ ಹಿಡಿದಿತ್ತು. ಆದರೆ, ಈ ಕ್ಷೇತ್ರದಿಂದ ವಿಜಯಸಿಂಹ ಅವರಿಗೇ ಟಿಕೆಟ್ ನೀಡಲಾಗುವುದು ಎಂದು ಎನ್ಸಿಪಿ ಹೇಳಿತ್ತು. ಈಗ, ವಿಜಯಸಿಂಹ ಮತ್ತು ರಂಜಿತ್ಸಿಂಹ ಎದುರಾಳಿಗಳಾಗಲಿದ್ದಾರೆಯೇ ಅಥವಾ ಎನ್ಸಿಪಿ ಬೇರೆಯವರಿಗೆ ಟಿಕೆಟ್ ನೀಡಲಿದೆಯೇ ಎಂಬ ಕುತೂಹಲ ಇದೆ.
ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ನ ರಾಧಾಕೃಷ್ಣ ವಿಖೆ ಪಾಟೀಲ್ ಮಗ ಡಾ. ಸುಜಯ್ ಅವರು ಕಳೆದ ವಾರವಷ್ಟೇ ಬಿಜೆಪಿ ಸೇರಿದ್ದರು. ಅಹ್ಮದ್ನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಲಾಗದು ಎಂದು ಕಾಂಗ್ರೆಸ್ ಹೇಳಿದ ಬಳಿಕ ಸುಜಯ್ ಅವರು ಬಿಜೆಪಿ ಸೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.