ಹೈದರಾಬಾದ್ (ಪಿಟಿಐ): ಆಂಧ್ರ ಪ್ರದೇಶದಲ್ಲಿ ಸೀಟು ಹೊಂದಾಣಿಕೆಗೆ ಸಂಬಂಧಿಸಿ 24 ಗಂಟೆಯೊಳಗಾಗಿ ತೆಲುಗು ದೇಶಂ ಪಕ್ಷ (ಟಿ.ಡಿ.ಪಿ) ತನ್ನ ನಿಲುವು ಸ್ಪಷ್ಟಪಡಿಸದಿದ್ದಲ್ಲಿ ಬಿಜೆಪಿ ಸ್ವಂತ ಶಕ್ತಿ ಮೇಲೆ ಚುನಾವಣೆ ಎದುರಿಸಲಿದೆ ಎಂದು ಆ ಪಕ್ಷದ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ತೆಲಂಗಾಣ ಮತ್ತು ಸೀಮಾಂಧ್ರದಲ್ಲಿ ಸೀಟು ಹೊಂದಾಣಿಕೆ ಕುರಿತು ಟಿಡಿಪಿಯೊಂದಿಗೆ ಮಾತುಕತೆ ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ ಗೊಂದಲ ಇನ್ನೂ ಹಾಗೆ ಉಳಿದಿದೆ. ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ನವದೆಹಲಿಯಲ್ಲಿ ಸೋಮವಾರ ಸಭೆ ಸೇರಿ ಈ ಬಗ್ಗೆ ನಿರ್ಧಾರಕ್ಕೆ ಬರಲಿದೆ ಎಂದು ಭಾನುವಾರ ಇಲ್ಲಿ ಹೇಳಿದ್ದಾರೆ.
‘ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಟಿಡಿಪಿ ಜೊತೆ ಮಾತುಕತೆ ನಡೆಸುವುದಕ್ಕೆ ಸಂಬಂಧಿಸಿದಂತೆ ಗೊಂದಲವಿದೆ. ಆದರೆ, ನಾವು ಅನಿರ್ದಿಷ್ಟಾವಧಿವರೆಗೆ ಕಾಯುವುದಿಲ್ಲ’ ಎಂದಿದ್ದಾರೆ. ಸೀಟು ಹೊಂದಾಣಿಕೆ ಕುರಿತಂತೆ ಟಿಡಿಪಿ ಮತ್ತು ಬಿಜೆಪಿ ಮಧ್ಯೆ ಹಲವು ಸುತ್ತಿನ ಮಾತುಕತೆ ನಡೆದಿವೆ. ಆದರೆ, ಅಂತಿಮ ತೀರ್ಮಾನಕ್ಕೆ ಬರಲು ಎರಡೂ ಪಕ್ಷಗಳು ವಿಫಲವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.