ಅಸಾಂಸೋಲ್ (ಪಶ್ಚಿಮ ಬಂಗಾಳ) (ಪಿಟಿಐ): ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಮತಗಟ್ಟೆ ವಶ ಪ್ರಕರಣಗಳು ನಡೆದಿವೆ ಎಂದು ಭಾನುವಾರ ಆಪಾದಿಸಿದ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ ಎಂದು ದೂರಿದ್ದಲ್ಲದೆ ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸವಾಲು ಹಾಕಿದರು.
'ನೀವು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ನಿಮ್ಮ ಉದ್ದೇಶ ಏನು? ನಾನು ಈಗ ಹೇಳುತ್ತಿರುವುದು ತಪ್ಪು ಎಂಬ ಭಾವನೆ ನಿಮ್ಮಲ್ಲಿ ಇದ್ದರೆ ನನ್ನ ವಿರುದ್ಧ ಇನ್ನೊಂದು ಪ್ರಕರಣ ದಾಖಲಿಸಲು ನೀವು ಮುಕ್ತರಾಗಿದ್ದೀರಿ' ಎಂದು ಮೋದಿ ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.
'ನಿಷ್ಪಕ್ಷಪಾತ ಚುನಾವಣೆ ನಡೆಸುವುದು ನಿಮ್ಮ ಜವಾಬ್ದಾರಿ. ನಾನು ಅತ್ಯಂತ ಗಂಭೀರ ಆರೋಪಗಳನ್ನು ಮಾಡುತ್ತಿದ್ದೇನೆ. ಚುನಾವಣಾ ಆಯೋಗವು ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾಗಿದೆ' ಎಂದು ಅವರು ದೂರಿದರು.
'ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಚುನಾವಣಾ ಹಿಂಸಾಚಾರ ಮತ್ತು ಮತಗಟ್ಟೆ ವಶ ಪ್ರಕರಣಗಳು ನಡೆದಿವೆ. ನಮ್ಮ ಅಭ್ಯರ್ಥಿ ಬಾಬುಲ್ ಸುಪ್ರಿಯೊ ವಿರುದ್ಧ ಖೊಟ್ಟಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಜನರಿಗೆ ರಕ್ಷಣೆ ನೀಡಬೇಕಾದದ್ದು ಚುನಾವಣಾ ಆಯೋಗದ ಕೆಲಸ. ನಿಮ್ಮ ಜವಾಬ್ದಾರಿಯನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸಿ ಎಂಬುದಾಗಿ ನಾನು ಮನವಿ ಮಾಡುವೆ' ಎಂದು ಅವರು ನುಡಿದರು.
ಚುನಾವಣಾ ಆಯೋಗದ ಬಳಿ ಸಂಪೂರ್ಣ ಸರ್ಕಾರಿ ಯಂತ್ರವಿದೆ. ಪ್ರಧಾನಿಗಿಂತಲೂ ಹೆಚ್ಚಿನ ಅಧಿಕಾರ ಅದಕ್ಕೆ ಇದೆ. ಪ್ರಜಾಪ್ರಭುತ್ವ ಹೀಗೆ ನಡೆಯದು. 30 ರಂದು ನಡೆದ ಚುನಾವಣೆ ವೇಳೆ ಎಷ್ಟು ಮತಗಟ್ಟೆ ವಶ ಪ್ರಕರಣಗಳು ನಡೆದಿವೆ ಎಂದು ನನಗೆ ಗೊತ್ತಿದೆ. ಈ ಆಟ ನಿರಂತರ ಮುಂದುವರಿಯಬೇಕೇ?' ಎಂದು ಮೋದಿ ಪ್ರಶ್ನಿಸಿದರು.
'ಉತ್ತರ ಪ್ರದೇಶದಲ್ಲಿ ಇನ್ನೂ ಕೆಲವು ಕಡೆ ಇಂತಹ ಮತಗಟ್ಟೆ ವಶ ಪ್ರಕರಣಗಳು ಘಟಿಸಲಿವೆ. ಆದರೆ ಚುನಾವಣಾ ಆಯೋಗ ಏನೂ ಮಾಡುವುದಿಲ್ಲ. ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಈ ಹಿಂಸಾಚಾರಗಳ ಪುನರಾವರ್ತನೆಯಾಗಲಿದೆ. ಚುನಾವಣೆಗಳು ಶಾಂತಿಯುತವಾಗಿ ನಡೆಯುವಂತೆ ನೋಡುವ ಹೊಣೆಗಾರಿಕೆ ಚುನಾವಣಾ ಆಯೋಗಕ್ಕೆ ಇಲ್ಲವೇ?' ಎಂದು ಗುಜರಾತ್ ಮುಖ್ಯಮಂತ್ರಿ ಕೇಳಿದರು.
'ಚುನಾವಣಾ ಕಾಯ್ದೆ ಉಲ್ಲಂಘನೆ ಆಗಿರುವ ವಿಚಾರದಲ್ಲಿ ಗುಜರಾತ್ ಮುಖ್ಯಮಂತ್ರಿಯ ಬಗ್ಗೆ ಗಂಭೀರವಾಗಿ ಗಮನಿಸಿರುವ ಚುನಾವಣಾ ಆಯೋಗ ಮೋದಿ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಸೂಚನೆ ನೀಡಿರುವುದನ್ನು ಗಮನಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.