ADVERTISEMENT

ಪಕ್ಷಾಂತರ ಯತ್ನ ತಡೆದ ರಾಹುಲ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಹೈದರಾಬಾದ್‌: ಕಾಂಗ್ರೆಸ್ ತೊರೆದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸೇರಲು ಯತ್ನಿಸಿದ್ದ ಮೇದಕ್‌ ಜಿಲ್ಲೆಯ ಪಠಾನ್‌ಚೆರುವು ಕ್ಷೇತ್ರದ ಶಾಸಕ ನಂದೀಶ್ವರ ಗೌಡ್‌ ಅವರು ರಾಹುಲ್‌ ಗಾಂಧಿ ಅವರಿಂದ ಬಂದ ಅಚ್ಚರಿಯ ದೂರ­ವಾಣಿ ಕರೆಯಿಂದಾಗಿ ಪಕ್ಷದಲ್ಲೇ ಉಳಿದಿದ್ದಾರೆ.

ಗೌಡ್‌ ಅವರೊಂದಿಗೆ ಎರಡು ಬಾರಿ ಮಾತನಾಡಿದ ರಾಹುಲ್‌ ಗಾಂಧಿ, ಗೌಡ್‌ ಅವರ ಎಲ್ಲಾ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿದರು. ಪಕ್ಷದ ಉಪಾಧ್ಯಕ್ಷರ ಕರೆ ಬಂದ ನಂತರ ಕಾಂಗ್ರೆಸ್‌ ಮುಖಂಡ ಪೊನ್ನಾಲ ಲಕ್ಷ್ಮಯ್ಯ ಅವರ ಜತೆ ಸುದ್ದಿಗಾರ­ರೊಂದಿಗೆ ಮಾತನಾಡಿದ ಗೌಡ್‌, ತಾವು ಪಕ್ಷ ತೊರೆಯುವುದಿಲ್ಲ ಎಂದು ಘೋಷಿಸಿದರು.

ವಿಲೀನದ ಕುರಿತಾಗಿ ಟಿಆರ್‌ಎಸ್‌ ಕೈಗೊಳ್ಳಲಿರುವ ನಿರ್ಧಾರಕ್ಕೆ ಕಾಯು­ತ್ತಿದ್ದ ಕಾಂಗ್ರೆಸ್‌ ಪಕ್ಷವು ಪ್ರತ್ಯೇಕ ಪ್ರದೇಶ ಕಾಂಗ್ರೆಸ್‌ ಸಮಿತಿ ಸ್ಥಾಪಿಸಲು ವಿಳಂಬ ಮಾಡಿತ್ತು. ಇದು ಪಕ್ಷದಲ್ಲಿ ಗೊಂದಲಕ್ಕೆ ಅನುವು ಮಾಡಿಕೊಟ್ಟಿತ್ತು.

ರಾಹುಲ್‌ ಗಾಂಧಿ ಅವರು ನೇರವಾಗಿ ಗೌಡ್‌ ಅವರಿಗೆ ಕರೆ ಮಾಡಿದ ನಂತರ ಎಚ್ಚೆತ್ತು­ಕೊಂಡಿ­ರುವ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಮುಖಂಡರು, ಟಿಆರ್‌ಎಸ್‌ನತ್ತ ಮುಖ­ಮಾಡಿದ್ದ ಮತ್ತೊಬ್ಬ ಮುಖಂಡ ಪ್ರತಾಪ್‌ ರೆಡ್ಡಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯಶಸ್ವಿ­ಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.