ಹೈದರಾಬಾದ್: ಕಾಂಗ್ರೆಸ್ ತೊರೆದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಸೇರಲು ಯತ್ನಿಸಿದ್ದ ಮೇದಕ್ ಜಿಲ್ಲೆಯ ಪಠಾನ್ಚೆರುವು ಕ್ಷೇತ್ರದ ಶಾಸಕ ನಂದೀಶ್ವರ ಗೌಡ್ ಅವರು ರಾಹುಲ್ ಗಾಂಧಿ ಅವರಿಂದ ಬಂದ ಅಚ್ಚರಿಯ ದೂರವಾಣಿ ಕರೆಯಿಂದಾಗಿ ಪಕ್ಷದಲ್ಲೇ ಉಳಿದಿದ್ದಾರೆ.
ಗೌಡ್ ಅವರೊಂದಿಗೆ ಎರಡು ಬಾರಿ ಮಾತನಾಡಿದ ರಾಹುಲ್ ಗಾಂಧಿ, ಗೌಡ್ ಅವರ ಎಲ್ಲಾ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿದರು. ಪಕ್ಷದ ಉಪಾಧ್ಯಕ್ಷರ ಕರೆ ಬಂದ ನಂತರ ಕಾಂಗ್ರೆಸ್ ಮುಖಂಡ ಪೊನ್ನಾಲ ಲಕ್ಷ್ಮಯ್ಯ ಅವರ ಜತೆ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡ್, ತಾವು ಪಕ್ಷ ತೊರೆಯುವುದಿಲ್ಲ ಎಂದು ಘೋಷಿಸಿದರು.
ವಿಲೀನದ ಕುರಿತಾಗಿ ಟಿಆರ್ಎಸ್ ಕೈಗೊಳ್ಳಲಿರುವ ನಿರ್ಧಾರಕ್ಕೆ ಕಾಯುತ್ತಿದ್ದ ಕಾಂಗ್ರೆಸ್ ಪಕ್ಷವು ಪ್ರತ್ಯೇಕ ಪ್ರದೇಶ ಕಾಂಗ್ರೆಸ್ ಸಮಿತಿ ಸ್ಥಾಪಿಸಲು ವಿಳಂಬ ಮಾಡಿತ್ತು. ಇದು ಪಕ್ಷದಲ್ಲಿ ಗೊಂದಲಕ್ಕೆ ಅನುವು ಮಾಡಿಕೊಟ್ಟಿತ್ತು.
ರಾಹುಲ್ ಗಾಂಧಿ ಅವರು ನೇರವಾಗಿ ಗೌಡ್ ಅವರಿಗೆ ಕರೆ ಮಾಡಿದ ನಂತರ ಎಚ್ಚೆತ್ತುಕೊಂಡಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖಂಡರು, ಟಿಆರ್ಎಸ್ನತ್ತ ಮುಖಮಾಡಿದ್ದ ಮತ್ತೊಬ್ಬ ಮುಖಂಡ ಪ್ರತಾಪ್ ರೆಡ್ಡಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.