ನವದೆಹಲಿ (ಪಿಟಿಐ): ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ನಡೆಸುತ್ತಿರುವ ಚುನಾವಣಾ ಪ್ರಚಾರ ಅತಿ ಆತ್ಮವಿಶ್ವಾಸದಿಂದ ಕೂಡಿದ್ದು 2004ರ ‘ಭಾರತ ಪ್ರಕಾಶಿಸುತ್ತಿದೆ’ ಮಾದರಿಯಲ್ಲಿಯೇ ಸಾಗುತ್ತಿದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿದರೂ ಬಿಜೆಪಿ ಬಹುಮತದ ಹತ್ತಿರಕ್ಕೂ ಬರುವುದು ಸಾಧ್ಯವಿದೆ ಎಂದು ಅನಿಸುವುದಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಯುಪಿಎಯ ಪ್ರಮುಖ ನಾಯಕರಾಗಿರುವ ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಮೋದಿ ನೇತೃತ್ವದಲ್ಲಿ ಬಿಜೆಪಿಯು ಜನರನ್ನು ತಲುಪಲು ಕಠಿಣ ಪ್ರಯತ್ನ ನಡೆಸುತ್ತಿರುವಾಗ ಕಾಂಗ್ರೆಸ್ ಕೂಡ ಹೆಚ್ಚು ಕ್ರಿಯಾಶೀಲವಾಗಬೇಕು ಎಂದು ಪವಾರ್ ಹೇಳಿದ್ದಾರೆ.
ಮೋದಿ ಅಲೆ ಇದೆ ಎಂಬುದನ್ನು ನಿರಾಕರಿಸಿದ ಶರದ್ ಪವಾರ್, ‘ಏಕ ವ್ಯಕ್ತಿ ಕೇಂದ್ರಿತ ಪ್ರಚಾರ ಪ್ರಮುಖ ಪ್ರತಿಪಕ್ಷವಾದ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಅನುಕೂಲಕರ ಪರಿಸ್ಥಿತಿ ಸೃಷ್ಟಿಸಿದೆ. ಆದರೆ ಅತಿ ಆತ್ಮವಿಶ್ವಾಸ ಅದನ್ನು ಹಾಳುಗೆಡವಲಿದೆ’ ಎಂದಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರಂತಹ ದೊಡ್ಡ ನಾಯಕರಿದ್ದಾಗಲೂ 2004ರಲ್ಲಿ ಬಿಜೆಪಿ ಚುನಾವಣೆಯಲ್ಲಿ ಸೋತಿತ್ತು. ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಮಾತಿನಲ್ಲಿಯೇ ಅವರು ಮುಳುಗಿ ಹೋದರು. ಮನಮೋಹನ್ ಸಿಂಗ್ ಅವರು ಹೇಗೆ ಪ್ರಧಾನಿಯಾದರು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಂಡಿಲ್ಲ ಎಂದು ಪವಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.