ನವದೆಹಲಿ (ಪಿಟಿಐ): ಲೋಕಸಭಾಧ್ಯಕ್ಷೆ ಮೀರಾ ಕುಮಾರ್, ಕೇಂದ್ರ ಸಚಿವ ಮನೀಶ್ ತಿವಾರಿ, ದೀಪೇಂದ್ರ ಹೂಡಾ, ನವೀನ್ ಜಿಂದಾಲ್ ಸೇರಿದಂತೆ 80–90 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಶುಕ್ರವಾರ ಅಂತಿಮಗೊಳಿಸಿದೆ.
ಕಾಂಗ್ರೆಸ್ನ ಹಿರಿಯ ನಾಯಕ ಪವನ್ ಕುಮಾರ್ ಬನ್ಸಾಲ್ ಅವರಿಗೂ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ.
ಬಿಹಾರದಲ್ಲಿ ಲಾಲು ನೇತೃತ್ವದ ಆರ್ಜೆಡಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಅಲ್ಲಿನ 12 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳೂ ಅಂತಿಮವಾಗಿವೆ.
ಚಿತ್ರನಟಿ ಜಯಪ್ರದಾ ಅವರಿಗೆ ಮೊರಾದಾಬಾದ್ನಿಂದ ಟಿಕೆಟ್ ನೀಡುವ ಸಾಧ್ಯತೆ ಇದೆ. ಕೇಂದ್ರ ಸಚಿವರಾದ ಸಲ್ಮಾನ್ ಖುರ್ಷಿದ್, ವೇಣಿ ಪ್ರಸಾದ್ ವರ್ಮಾ, ಶ್ರೀಪ್ರಕಾಶ್ ಜೈಸ್ವಾಲ್, ಜಿತಿನ್ ಪ್ರಸಾದ್ ಮತ್ತು ಆರ್.ಪಿ.ಎನ್. ಸಿಂಗ್ ಅವರಿಗೆ ಅವರು ಈಗ ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಂದಲೇ ಮತ್ತೆ ಟಿಕೆಟ್ ದೊರೆಯಲಿದೆ ಎನ್ನಲಾಗಿದೆ. ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಮಿಲಿಂದ್ ದೇವ್ರಾ, ಪ್ರಿಯಾ ದತ್, ಗುರುದಾಸ್ ಕಾಮತ್ ಮುಂತಾದ ನಾಯಕರು ಮಹಾರಾಷ್ಟ್ರದಿಂದ ಮತ್ತೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.