ADVERTISEMENT

ಒಬ್ಬ ವ್ಯಕ್ತಿಯಿಂದ ದೇಶ ಮುನ್ನಡೆಸಲು ಅಸಾಧ್ಯ:ಮುನಿನರಸಿಂಹಯ್ಯ

ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಮೊಯಿಲಿ ಪರವಾಗಿ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 13:24 IST
Last Updated 13 ಏಪ್ರಿಲ್ 2019, 13:24 IST
ವಿಜಯಪುರ ಹೋಬಳಿ ದೊಡ್ಡಮುದ್ದೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ಪರವಾಗಿ ಮುಖಂಡರು ಮತಯಾಚನೆ ಮಾಡಿದರು
ವಿಜಯಪುರ ಹೋಬಳಿ ದೊಡ್ಡಮುದ್ದೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ಪರವಾಗಿ ಮುಖಂಡರು ಮತಯಾಚನೆ ಮಾಡಿದರು   

ವಿಜಯಪುರ : ಒಬ್ಬ ವ್ಯಕ್ತಿಯಿಂದ ಈ ದೇಶವನ್ನು ಮುನ್ನಡೆಸಲಿಕ್ಕೆ ಎಂದಿಗೂ ಸಾಧ್ಯವಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿರುವ ನಾವು ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ ಎಂದು ಮುಖಂಡ ಮುನಿನರಸಿಂಹಯ್ಯ ಹೇಳಿದರು.

ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರ ಪರವಾಗಿ ಕಾಂಗ್ರೆಸ್, ಜೆಡಿಎಸ್ ಮುಖಂಡರೊಂದಿಗೆ ಮತಯಾಚನೆ ಮಾಡಿ ಅವರು ಮಾತನಾಡಿದರು.

ದೇಶದಲ್ಲಿ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿರುವ ಮೋದಿ ತನ್ನೊಬ್ಬನಿಂದಲೇ ದೇಶ ಉದ್ಧಾರವಾಗುತ್ತಿದೆ. 60 ವರ್ಷಗಳಲ್ಲಿ ಏನೂ ಆಗಿಲ್ಲ, 5 ವರ್ಷಗಳಲ್ಲಿ ಮಾಡಿದ್ದೇನೆ ಎಂದು ಹೇಳಿಕೊಂಡು, ದೇಶದ ರಕ್ಷಣಾ ಕ್ಷೇತ್ರವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಅವರು ಜಾರಿಗೆ ತಂದಿರುವ ಬಹುತೇಕ ಯೋಜನೆಗಳು ವಿಫಲವಾಗಿರುವ ಕಾರಣ ಅವರಿಗೆ ಅಭಿವೃದ್ಧಿಯ ಬಗ್ಗೆ ಹೇಳಿಕೊಳ್ಳಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ADVERTISEMENT

ಬಿಜೆಪಿಯಲ್ಲಿನ ಬಹುತೇಕ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿರುವ ಅವರು ಈ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ. ಆದ್ದರಿಂದ ಬಿಜೆಪಿಯವರು ಮೋದಿ ಎಂಬ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ ಅವರಿಗೆ ಉತ್ತರ ಕೊಡುವ ಶಕ್ತಿ ಮತದಾರರಲ್ಲಿದೆ ಆದ್ದರಿಂದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರಿಗೆ ಮತ ನೀಡಿ ಎಂದರು.

ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಕೋರಮಂಗಲ ವೀರಪ್ಪ ಮಾತನಾಡಿ, ದೇಶದಲ್ಲಿ ಜನಪರವಾದ ಸರ್ಕಾರ ಬರಬೇಕು, ಬಡವರು, ಹಿಂದುಳಿದ ವರ್ಗಗಳು , ಅಲ್ಪಸಂಖ್ಯಾತರು ಎಲ್ಲರೂ ಸೇರಿ ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕಾದರೆ ಬಿಜೆಪಿ ಅಧಿಕಾರದಿಂದ ದೂರವಿರಬೇಕು. ಜಾತ್ಯತೀತ ಪಕ್ಷಗಳು ಒಂದಾಗಬೇಕು ಎಂದರು.

ಹೋದ ಕಡೆಯಲೆಲ್ಲಾ ಸುಳ್ಳು ಮಾತುಗಳಿಂದ ಜನರನ್ನು ಮರಳುಗೊಳಿಸುವ ಮೋದಿಗೆ ಈ ಬಾರಿ ತಕ್ಕ ಉತ್ತರ ನೀಡಬೇಕು ಆದ್ದರಿಂದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರಿಗೆ ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ ನೀಡಬೇಕು ಎಂದರು.

ಹಾರೋಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್. ಹರೀಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಈ ದೇಶದಲ್ಲಿ ಬಡತನ ತೊಲಗಿಸುವುದು, ರೈತರನ್ನು ಸಾಲಗಳಿಂದ ವಿಮುಕ್ತರನ್ನಾಗಿ ಮಾಡುವುದು, ಬಡಕುಟುಂಬಗಳು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳುವಂತಹ ವಾತಾವರಣ ನಿರ್ಮಾಣ ಮಾಡುವ ಭರವಸೆ ಕೊಟ್ಟಿದ್ದಾರೆ. ಮೈತ್ರಿ ಸರ್ಕಾರವೂ ಅನೇಕ ಜನಪರ ಯೋಜನೆಗಳನ್ನು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತಕ್ಕಾಗಿ ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕು ಎಂದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯುಳ್ಳ ಕರಪತ್ರಗಳನ್ನು ಮನೆ ಮನೆಗೆ ವಿತರಣೆ ಮಾಡಿ ಮತಯಾಚನೆ ಮಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಚೇತನ್‌ ಗೌಡ, ಕೆ.ಪಿ.ಸಿ.ಸಿ. ಸದಸ್ಯ ಚಿನ್ನಪ್ಪ, ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚೈತ್ರಾ ವೀರೇಗೌಡ, ಎ.ಪಿ.ಎಂ.ಸಿ.ಉಪಾಧ್ಯಕ್ಷ ಸುಧಾಕರ್, ಚಿಕ್ಕನಹಳ್ಳಿ ಸುಬ್ಬಣ್ಣ, ಮುದುಗುರ್ಕಿ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬುಳ್ಳಹಳ್ಳಿ ರಾಜಪ್ಪ, ವರಲಕ್ಷ್ಮಮ್ಮ, ಮಾಲಾ, ಮುನಿರಾಜು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮುನಿರಾಜು, ಹಾರೋಹಳ್ಳಿ ಚಂದ್ರಪ್ಪ, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.