ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜೆಡಿಎಸ್ ಅಧಿಕೃತವಾಗಿ ಗುರುವಾರ ಬಿಡುಗಡೆ ಮಾಡಿದೆ.
ಪಕ್ಷದ ಸಂಸದೀಯ ಮಂಡಳಿ ಇದೇ 10ರಂದು ಮಾಡಿದ್ದ ಶಿಫಾರಸು ಆಧಾರದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡಿದರು.
ಕಾಂಗ್ರೆಸ್ನಲ್ಲಿ ಟಿಕೆಟ್ ದೊರೆಯದೆ ಬೇಸತ್ತಿರುವ ಕೆಲ ಮುಖಂಡರು ಜೆಡಿಎಸ್ ಸೇರಲಿದ್ದಾರೆ. ಇದಾದ ನಂತರ ಉಳಿದ 13 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೆಜೆಪಿ ತೊರೆದು ಗುರುವಾರ ಅಧಿಕೃತವಾಗಿ ಜೆಡಿಎಸ್ ಸೇರಿದ ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್ಗೆ (ಉಡುಪಿ – ಚಿಕ್ಕಮಗಳೂರು) ಮೊದಲ ಪಟ್ಟಿಯಲ್ಲೇ ಟಿಕೆಟ್ ನೀಡಲಾಗಿದೆ.
ದೇವೇಗೌಡ ಹಾಸನದಿಂದ ಸ್ಪರ್ಧಿಸುವರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ತುಮಕೂರಿನಿಂದ ಕಣಕ್ಕೆ ಇಳಿದಿದ್ದಾರೆ.
ಕಾಂಗ್ರೆಸ್ನಲ್ಲಿ ಟಿಕೆಟ್ ದೊರೆಯದೆ ಹತಾಶರಾಗಿರುವ ಹಿರಿಯ ಮುಖಂಡ ಸಿ.ಕೆ.ಜಾಫರ್ ಷರೀಫ್, ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ, ಮಾಜಿ ಶಾಸಕ ಮಹಿಮ ಪಟೇಲ್ ಜೆಡಿಎಸ್ ಸೇರುವುದು ಬಹುತೇಕ ಖಚಿತವಾಗಿದೆ.
ಮೈಸೂರಿನಿಂದ ಜಾಫರ್ ಷರೀಫ್, ಬೆಂಗಳೂರು ಸೆಂಟ್ರಲ್ನಿಂದ ಸಾಂಗ್ಲಿಯಾನ, ದಾವಣಗೆರೆಯಿಂದ ಮಹಿಮ ಪಟೇಲ್ ಕಣಕ್ಕೆ ಇಳಿಯಲಿದ್ದಾರೆ ಎಂದು ಗೊತ್ತಾಗಿದೆ.
ಕಾಂಗ್ರೆಸ್ ಟಿಕೆಟ್ಗೆ ಪ್ರಯತ್ನಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಅವರೂ ಜೆಡಿಎಸ್ಗೆ ಸೇರಿ, ಬೆಂಗಳೂರು ಉತ್ತರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
‘ಜಾಫರ್ ಷರೀಫ್, ಸಾಂಗ್ಲಿಯಾನ ಅವರೊಂದಿಗೆ ಚರ್ಚೆ ನಡೆದಿರುವುದು ನಿಜ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. 2–3 ದಿನದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ’ ಎಂದು ದೇವೇಗೌಡ ಹೇಳಿದರು.
‘ನಮ್ಮದು ಜಾತ್ಯತೀತ ಪಕ್ಷ. ಎಲ್ಲ ಧರ್ಮ, ಸಮುದಾಯದವರಿಗೆ ಅವಕಾಶ ನೀಡುತ್ತಾ ಬಂದಿದ್ದೇವೆ. ಪಕ್ಷದ ತತ್ವ – ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ ಇದೆ’ ಎಂದರು.
‘ಹಾಸನ ಕ್ಷೇತ್ರದಲ್ಲಿ 2–3 ದಿನ ಮಾತ್ರ ಇರುತ್ತೇನೆ. ಅಲ್ಲಿನ ಜನರ ಮೇಲೆ ನನಗೆ ವಿಶ್ವಾಸವಿದೆ. ಹಾಸನದ ಬಗ್ಗೆ ಭೀತಿ ಇಲ್ಲ’ ಎಂದು ತಿಳಿಸಿದರು.
ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಎಚ್.ಸಿ.ನೀರಾವರಿ, ಮುಖಂಡರಾದ ಅಬ್ದುಲ್ ಅಜೀಂ, ರಮೇಶ್ಬಾಬು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.