ಬೆಂಗಳೂರು: ಲೋಕಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿರುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್, ‘ಜೀತದಿಂದ ಮುಕ್ತನಾಗಿರುವುದಕ್ಕೆ ನನಗೆ ಸಂತೋಷವಾಗಿದೆ’ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಹಿರಿಯ ಮುಖಂಡರಾಗಿರುವ ಜಾಫರ್ ಷರೀಫ್ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೇಳಿದ್ದರು. ಆದರೆ, ಅವರಿಗೆ ಟಿಕೆಟ್ ನಿರಾಕರಿಸಿದ ಹೈಕಮಾಂಡ್, ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರನ್ನು ಕಣಕ್ಕಿಳಿಸುವ ತೀರ್ಮಾನವನ್ನು ಪ್ರಕಟಿಸಿದೆ.
ಇದರಿಂದ ಅಸಮಾಧಾನಗೊಂಡಿರುವ ಷರೀಫ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಇಂಗಿತವನ್ನು ಹೊರಹಾಕಿದ್ದಾರೆ. ಆದರೆ, ಮೆಕ್ಕಾ ಯಾತ್ರೆಗೆ ಹೊರಟಿರುವ ಅವರು, ಇದೇ 19ರಂದು ವಾಪಸಾದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಕುರಿತು ಷರೀಫ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿದಾಗ, ‘ಇನ್ನೂ ಚುನಾವಣೆಯಲ್ಲಿ ಸ್ಪರ್ಧಿಸುವ ಶಕ್ತಿ ನನಗೆ ಖಂಡಿತವಾಗಿಯೂ ಇದೆ. ಯಾವುದೇ ಕ್ಷೇತ್ರದಿಂದ ಬೇಕಾದರೂ ಚುನಾವಣಾ ಕಣಕ್ಕಿಳಿಯುವ ತಾಕತ್ತು ಇದೆ’ ಎಂದು ಉತ್ತರಿಸಿದರು.
ಕಾಂಗ್ರೆಸ್ ಜೊತೆಗಿನ ಸುದೀರ್ಘ ಸಂಬಂಧ ಕಡಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದೀರಾ ಎಂದು ಕೇಳಿದಾಗ, ‘ಪಕ್ಷಕ್ಕೆ ವಿದಾಯ ಹೇಳುವ ಕಾಲ ಬಂದಿದೆ ಅನಿಸುತ್ತಿದೆ’ ಎಂದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ವಿರುದ್ಧ ಅಭ್ಯರ್ಥಿ ಹಾಕದಂತೆ ಪತ್ರ ಬರೆದಿದ್ದು ಮುಳುವಾಯಿತೇ ಎಂಬ ಪ್ರಶ್ನೆಗೆ, ‘ಗೌಡರು ಹಿರಿಯ ರಾಜಕಾರಣಿ. ಅವರಿಗೆ ಸ್ಪರ್ಧೆ ಒಡ್ಡುವುದು ಬೇಡ ಎಂಬ ಸದುದ್ದೇಶದಿಂದಷ್ಟೇ ಪತ್ರ ಬರೆದಿದ್ದೆ’ ಎಂದು ಹೇಳಿದರು.
ಋಣಮುಕ್ತ
ನಾನು ಇದುವರೆಗೂ ಪಕ್ಷದ (ಕಾಂಗ್ರೆಸ್) ಋಣದಲ್ಲಿ ಇದ್ದೆ. ಈಗ ದೇವರು ಆ ಋಣದಿಂದ ಮುಕ್ತಗೊಳಿಸಿದ್ದಾನೆ. ಇದರಿಂದಾಗಿ ದೇಶದ ಭವಿಷ್ಯದ ಬಗ್ಗೆ ಯೋಚಿಸಲು ನನಗೆ ಅವಕಾಶ ದೊರೆಯುತ್ತಿದೆ. ನಾನು ಮೆಕ್ಕಾಗೆ ಹೊರಟಿದ್ದೇನೆ. ಮುಂದಿನ ನಿರ್ಧಾರದ ಬಗ್ಗೆ ದೇವರ ಆಶೀರ್ವಾದ ಬೇಡುತ್ತೇನೆ.
-–ಜಾಫರ್ ಷರೀಫ್
ಜೆಡಿಎಸ್ ಟಿಕೆಟ್
ದೇವೇಗೌಡ ಮತ್ತು ಷರೀಫ್ ಅವರ ನಡುವೆ ದೀರ್ಘಕಾಲದ ರಾಜಕೀಯ ಸಂಬಂಧ ಇದೆ. ಇಬ್ಬರಿಗೂ ಇದು ಕೊನೆಯ ಚುನಾವಣೆ ಅನಿಸುತ್ತಿದೆ. ಜೆಡಿಎಸ್ ಸೇರಿ, ಚುನಾವಣೆಗೆ ನಿಲ್ಲುವ ಅವಕಾಶ ಷರೀಫ್ ಅವರಿಗೆ ಮುಕ್ತವಾಗಿದೆ.
–ಎಚ್.ಡಿ. ಕುಮಾರಸ್ವಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.