
ಬಾಗಲಕೋಟೆ: ಪಕ್ಷೇತರರಾಗಿ ಕಣದಲ್ಲಿರುವ ಇನ್ನೊಬ್ಬ ಅಭ್ಯರ್ಥಿ ನಾಗಪ್ಪ ಫಕೀರಪ್ಪ ಶಿರಗುಪ್ಪಿ, ನಾಮಪತ್ರ ಹಿಂಪಡೆಯಲು ಇಟ್ಟ ಬೇಡಿಕೆ ₨ 1 ಲಕ್ಷ!
ಹೌದು, ಚುನಾವಣಾಧಿಕಾರಿ ಕಚೇರಿ ಸಮೀಪದಲ್ಲೇ, ಅದರಲ್ಲೂ ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಎದುರಲ್ಲೇ ನಾಗಪ್ಪ ಅವರನ್ನು ನಾಮಪತ್ರ ಹಿಂಪಡೆಯುವಂತೆ ರಾಷ್ಟ್ರೀಯ ಪಕ್ಷವೊಂದರ ಜಿಲ್ಲಾ ಘಟಕದ ಅಧ್ಯಕ್ಷರು ಮನವಿ ಮಾಡಿದರು.
‘ಚುನಾವಣೆಗಾಗಿ ನಾನು ಈಗಾಗಲೇ ₨ 80 ಸಾವಿರ ಖರ್ಚು ಮಾಡಿದ್ದೇನೆ, ₨ 1 ಲಕ್ಷ ಹಣ ನೀಡುವುದಾದರೇ ಮಾತ್ರ ನಾಮಪತ್ರ ಹಿಂಪಡೆಯುತ್ತೇನೆ’ ಎಂದು ಅವರು ಬೇಡಿಕೆ ಇಟ್ಟರು. ಇದಕ್ಕೆ ಒಪ್ಪದ ರಾಷ್ಟ್ರೀಯ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ‘₨ 40 ಸಾವಿರ ನೀಡುತ್ತೇನೆ. ಇದಕ್ಕೂ ಹೆಚ್ಚು ನೀಡಲು ಸಾಧ್ಯವಿಲ್ಲ, ಒಪ್ಪಿಕೊಂಡು ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳಿ’ ಎಂದು ಪಕ್ಷದ ಶಾಲನ್ನು ಪಕ್ಷೇತರ ಅಭ್ಯರ್ಥಿಯ ಕೊರಳಿಗೆ ಹಾಕಲು ಮುಂದಾದರು.
ಇದಕ್ಕೆ ಒಪ್ಪದ ಅವರು ಸಾಧ್ಯವಿಲ್ಲ ಎಂದು ಹೊರಬಂದರು. ಅಷ್ಟೊತ್ತಿಗಾಗಲೇ ನಾಮಪತ್ರ ಹಿಂಪಡೆಯವ ಸಮಯ ಮುಕ್ತಾಯವಾದ ಸುದ್ದಿ ತಿಳಿದ ನಾಗಪ್ಪ, ಗುಪ್ತಚರ ಪೊಲೀಸರ ಬಳಿಗೆ ಬಂದು, ‘ಚುನಾವಣಾಧಿಕಾರಿಗಳು ಪಾರ್ಟಿ ಫಂಡ್ ಎಷ್ಟು ಕೊಡುತ್ತಾರೆ’ ಎಂದು ಪ್ರಶ್ನಿಸಿದರು!
ದಿಗಿಲುಗೊಂಡ ಗುಪ್ತಚರ ಪೊಲೀಸರು, ‘ಮೊದಲು ಚುನಾವಣೆಯಲ್ಲಿ ಗೆಲ್ಲು, ಆಮೇಲೆ ನಿನ್ನ ಬಳಿಗೆ ಕೋಟಿ ಕೋಟಿ ಹಣ ಬರುತ್ತೆ’ ಎಂದು ತಮಾಷೆ ಮಾಡಿದರು. ಆದರೆ, ಪೊಲೀಸರ ಮಾತು ನಿಜವೆಂದು ಭಾವಿಸಿದ ಆ ಅಭ್ಯರ್ಥಿಯ ಖುಷಿ ಹೇಳತೀರದಾಯಿತು. ‘ಅಷ್ಟೊಂದು ಹಣ ಬರುವುದಾದರೇ ನಾನು ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ’ ಎಂದು ಘೋಷಿಸಿ ಹೊರನಡೆದರು.ಕೊನೆಗೂ ಕಣದಲ್ಲೇ ಉಳಿದ ಈ ಅಭ್ಯರ್ಥಿಗೆ ಚುನಾವಣಾ ಆಯೋಗ ನೀಡಿರುವ ಚಿಹ್ನೆ ಬಕೆಟ್!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.