ಮಂಗಳೂರು: ‘ಧೈರ್ಯವಿದ್ದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಂಗಳೂರಿನಿಂದ ಕಣಕ್ಕಿಳಿಯಲಿ. ಪತ್ನಿಯನ್ನು ಪೊರೆಯಬೇಕಾದ ಪತಿಧರ್ಮವನ್ನು ಪಾಲಿಸಲಿಲ್ಲ ಎಂಬ ಒಂದೇ ವಿಷಯದ ಆಧಾರದಲ್ಲಿ ಅವರನ್ನು ಸೋಲಿಸುತ್ತೇವೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಸವಾಲು ಹಾಕಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಮಗೆ ಮದುವೆ ಆಗಿದೆಯೇ? ಎಂದು ಮೋದಿ ಅವರಿಗೆ ನಾನು 6 ತಿಂಗಳ ಹಿಂದೆಯೇ ಬಹಿರಂಗ ಸವಾಲು ಹಾಕಿದ್ದೆ. ಅವರು 17 ವರ್ಷದ ಯಶೋದಾ ಬೆನ್ ಎಂಬ ಯುವತಿಯನ್ನು ಮದುವೆಯಾಗಿ 3 ವರ್ಷ ಸಂಸಾರ ನಡೆಸಿ, ಆಕೆಯ ಕೈ ಬಿಟ್ಟಿದ್ದರು.
ಆಕೆಗೆ ವಿಚ್ಛೇದನವನ್ನೂ ನೀಡಿಲ್ಲ. ಶಿಕ್ಷಕಿಯಾಗಿದ್ದ ಆ ಮಹಿಳೆ ಜೀವನವಿಡೀ ನೋವಿನಿಂದ ಕಳೆದಿದ್ದರೂ ಪತಿಯ ಬಗ್ಗೆ ದ್ವೇಷ ಇಟ್ಟುಕೊಂಡಿಲ್ಲ. ಸೀತೆಯಂತೆ ಪತಿವ್ರತೆ ಆಕೆ. ಪತ್ನಿಯನ್ನು ಕಾಪಾಡಲು ಆಗದ ವ್ಯಕ್ತಿ ದೇಶವನ್ನು ರಕ್ಷಿಸಲು ಸಾಧ್ಯವೇ?’ ಎಂದು ಪೂಜಾರಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.