ADVERTISEMENT

ಪಾಕಿಸ್ತಾನ ಧ್ವಜವುಳ್ಳ ಕರಪತ್ರ ಹಂಚಿಕೆ ಆರೋಪ: ಮುನಿರತ್ನ, ಯಾರಬ್ ವಿರುದ್ಧ ದೂರು

ಪಾಕಿಸ್ತಾನ ಧ್ವಜವುಳ್ಳ ಕರಪತ್ರ ಹಂಚಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 1 ಮೇ 2023, 22:11 IST
Last Updated 1 ಮೇ 2023, 22:11 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ‘ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಯಾರಬ್‌ ಎಂಬಾತ ಕಾಂಗ್ರೆಸ್‌ ನಾಯಕರು ಹಾಗೂ ಪಕ್ಷದ ಚಿಹ್ನೆಯೊಂದಿಗೆ ಪಾಕಿಸ್ತಾನ ಧ್ವಜವಿರುವ ಕರಪತ್ರವನ್ನು ಮುದ್ರಿಸಿ ಹಂಚಿಕೆ ಮಾಡಿ ಅಶಾಂತಿ ಸೃಷ್ಟಿಸುವ ಷಡ್ಯಂತ್ರ ನಡೆಸಿದ್ದಾರೆ’ ಎಂದು ಆರೋಪಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್.ಕುಸುಮಾ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ.

‘ದೂರು ಬಂದಿದ್ದು ಎನ್‌ಸಿಆರ್‌ ದಾಖಲಿಸಿಕೊಳ್ಳಲಾಗಿದೆ. ಕಾನೂನು ಸಲಹೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಶಾಸಕ ಮುನಿರತ್ನ ಅವರ ಆಪ್ತ ಬಳಗದಲ್ಲಿ ಯಾರಬ್‌ ಗುರುತಿಸಿಕೊಂಡು ಅವರ ಬೆಂಬಲಿಗರಾಗಿ ಕ್ಷೇತ್ರದಲ್ಲಿ ಪರಿಚಿತರು. ಏಪ್ರಿಲ್‌ 30ರಂದು ಚುನಾವಣೆ ಪ್ರಚಾರದ ವೇಳೆ ಕರಪತ್ರವು ನನಗೆ ದೊರಕಿದೆ. ಚುನಾವಣೆ ವೇಳೆ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆದಿದೆ. ಕಾಂಗ್ರೆಸ್‌ ನಾಯಕರ ಜತೆಗೆ ದುರುದ್ದೇಶ ಪೂರ್ವಕವಾಗಿ ಪಾಕಿಸ್ತಾನದ ಧ್ವಜವನ್ನು ಮುದ್ರಿಸಲಾಗಿದೆ. ಸ್ವಯಂ ಘೋಷಿತವಾಗಿ ಯಾರಬ್‌ ಕಾಂಗ್ರೆಸ್‌ ಬೆಂಬಲಿತನೆಂದು ಘೋಷಿಸಿಕೊಂಡು, ನನಗೆ ಬೆಂಬಲ ನೀಡುವುದಾಗಿ ಕರಪತ್ರದಲ್ಲಿ ಹೇಳಿಕೊಂಡಿದ್ಧಾರೆ. ಕರಪತ್ರ ಮುದ್ರಿಸಿ ಹಂಚಿರುವ ಯಾರಬ್‌, ಇದಕ್ಕೆ ಪ್ರೇರಣೆ ನೀಡಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ವೇಲುನಾಯ್ಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಕುಸುಮಾ ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.