ADVERTISEMENT

ರಮೇಶ ತಂತ್ರಕ್ಕೆ ‘ಮೂಲ’ ಮಂತ್ರದ ಫಲ..! ಗುರು–ಶಿಷ್ಯರಿಗೆ ಈಶ್ವರಪ್ಪ ಖಡಕ್‌ ಕ್ಲಾಸು

ಬಿಜೆಪಿ ಚಟುವಟಿಕೆ ಬಿರುಸು

ಡಿ.ಬಿ, ನಾಗರಾಜ
Published 30 ಏಪ್ರಿಲ್ 2019, 16:05 IST
Last Updated 30 ಏಪ್ರಿಲ್ 2019, 16:05 IST
ಬಿಜೆಪಿ ಹುರಿಯಾಳಾಗಿ ರಮೇಶ ಜಿಗಜಿಣಗಿ ಮಂಗಳವಾರ ನಾಮಪತ್ರ ಸಲ್ಲಿಕೆಗೂ ಮುನ್ನ ವಿಜಯಪುರದಲ್ಲಿ ನಡೆಸಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರುಪ್ರಜಾವಾಣಿ ಚಿತ್ರ
ಬಿಜೆಪಿ ಹುರಿಯಾಳಾಗಿ ರಮೇಶ ಜಿಗಜಿಣಗಿ ಮಂಗಳವಾರ ನಾಮಪತ್ರ ಸಲ್ಲಿಕೆಗೂ ಮುನ್ನ ವಿಜಯಪುರದಲ್ಲಿ ನಡೆಸಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರುಪ್ರಜಾವಾಣಿ ಚಿತ್ರ   

ವಿಜಯಪುರ:ಬಿಜೆಪಿಯ ಹುರಿಯಾಳು ರಮೇಶ ಜಿಗಜಿಣಗಿ ಸೋಮವಾರ ಉರುಳಿಸಿದ ರಾಜಕೀಯ ತಂತ್ರಗಾರಿಕೆಯ ದಾಳ ಫಲ ನೀಡಿದೆ.

ಟಿಕೆಟ್‌ ‘ಕೈ’ ತಪ್ಪಿದ್ದಕ್ಕೆ ಅಸಮಾಧಾನಿತಗೊಂಡಿದ್ದ ದಲಿತ ಬಲಗೈ ಸಮಾಜ ಮಂಗಳವಾರ ವಿಜಯಪುರದ ಬುದ್ಧವಿಹಾರದಲ್ಲಿ ಸಭೆ ನಡೆಸಿದ್ದು, ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಮಾಜದ ಹಿರಿಯರು, ಮುಖಂಡರು ಘೋಷಿಸಿದ್ದಾರೆ.

‘ಸಮಾಜದ ಆಕ್ರೋಶ ತಣಿದಿಲ್ಲ. ಟಿಕೆಟ್‌ಗಾಗಿ ಛಲ ತೊಟ್ಟರೂ ಚಲವಾದಿಗಳಿಗೆ ಕಾಂಗ್ರೆಸ್‌ನಲ್ಲಿ ಅವಕಾಶ ಸಿಗಲಿಲ್ಲ. ಸಮುದಾಯದೊಟ್ಟಿಗೆ ಸಹೋದರತೆಯ ಬಾಂಧವ್ಯ ಹೊಂದಿರುವ ದಲಿತ ಎಡಗೈ ಮಾದಿಗ ಸಮಾಜಕ್ಕೆ ಬಿಜೆಪಿಯಿಂದ ಅವಕಾಶ ಸಿಕ್ಕಿದೆ.

ADVERTISEMENT

ನಮ್ಮೊಳಗಿನ ತಿಕ್ಕಾಟ, ಘರ್ಷಣೆ ಬದಿಗೊತ್ತಿ, ‘ಮೂಲ ಅಸ್ಪೃಶ್ಯ’ ಎಂಬ ಒಂದೇ ಮಾನದಂಡದಡಿ ರಮೇಶ ಜಿಗಜಿಣಗಿ ಬೆಂಬಲಿಸೋಣ. ಇದು ಆಂತರಿಕ ನಿರ್ಧಾರ. ಬಹಿರಂಗವಾಗಿ ಯಾವೊಂದು ಘೋಷಣೆ, ಪ್ರಕಟಣೆ ಇರಲ್ಲ ಎಂಬ ರಹಸ್ಯ ನಿರ್ಣಯಕ್ಕೆ ಬರಲಾಗಿದೆ’ ಎಂದು ಸಭೆಯಲ್ಲಿ ಭಾಗಿಯಾಗಿದ್ದ ದಲಿತ ಬಲಗೈ ಸಮಾಜದ ಪ್ರಬಲ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಯತ್ನಾಳ ನಿರ್ಲಕ್ಷ; ಈಶ್ವರಪ್ಪ ಗರಂ

ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಸುವ ಸಂದರ್ಭ ಉಪಸ್ಥಿತರಿರಲಿಕ್ಕಾಗಿ, ಸೋಮವಾರ ರಾತ್ರಿಯೇ ವಿಜಯಪುರಕ್ಕೆ ಬಂದು ವಾಸ್ತವ್ಯ ಹೂಡಿದ್ದ ಬಿಜೆಪಿ ಮುಖಂಡ, ಶಾಸಕ ಕೆ.ಎಸ್‌.ಈಶ್ವರಪ್ಪ ಖಾಸಗಿ ಹೋಟೆಲ್‌ನಲ್ಲಿ ಸ್ಥಳೀಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು ಎಂಬುದು ಗೊತ್ತಾಗಿದೆ.

ಈಶ್ವರಪ್ಪ ಬಂದಿಳಿಯುತ್ತಿದ್ದಂತೆ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ನಗರ ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮತ್ತಿತರರು ಪಕ್ಷದ ಶಿಷ್ಟಾಚಾರದಂತೆ ಭೇಟಿಯಾದರು.

ಆರಂಭದಲ್ಲೇ ಈಶ್ವರಪ್ಪ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದ ರೂಪುರೇಷೆಯ ಮಾಹಿತಿ ಕೇಳಿದರು. ‘10,000ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ತೆರೆದ ವಾಹನದ ವ್ಯವಸ್ಥೆ ಮಾಡಿದ್ದೇವೆ. ಮೆರವಣಿಗೆ ಇರಲಿದೆ’ ಎಂದು ಸ್ಥಳೀಯ ಮುಖಂಡರು ತಿಳಿಸಿದರು.

‘ಬಹಿರಂಗ ಸಮಾರಂಭ ನಡೆಸಲ್ಲವೇ ? ಮಂಟಪ ಹಾಕಲ್ಲವೇ ? ಭಾಷಣ ಮಾಡುವುದು ಎಲ್ಲಿ ? ಎಂದು ಈಶ್ವರಪ್ಪ ಕೇಳಿದರು. ಇದಕ್ಕೆ ಮುಖಂಡರು ವಾಹನದಲ್ಲೇ ಎನ್ನುತ್ತಿದ್ದಂತೆ ಗರಂ ಆದರು. ಬೃಹತ್ ಸಂಖ್ಯೆಯಲ್ಲಿ ಜಮಾಯಿಸುವ ಕಾರ್ಯಕರ್ತರಿಗೆ ಕೂರಲು ವ್ಯವಸ್ಥೆ ಇಲ್ಲ ಅಂದರೇ ಏನು ಹೇಳಬೇಕು. ನೀವೆಲ್ಲಾ ಹಿರಿಯ ಹಾಗೂ ಹಳೆಯ ಕಾರ್ಯಕರ್ತರಿದ್ದೀರಿ. ಕಾರ್ಯಕ್ರಮ ರೂಪಿಸುವ ಬಗ್ಗೆ ಇನ್ನೂ ಹೇಳಬೇಕಾ ?’ ಎಂದು ಕೆಎಸ್‌ಇ ಕಿಡಿಕಾರಿದರು ಎಂಬುದು ಗೊತ್ತಾಗಿದೆ.

‘ನಾಮಪತ್ರ ಸಲ್ಲಿಕೆಗೆ ಯತ್ನಾಳರಿಗೆ ಆಹ್ವಾನ ನೀಡಿದ್ದೀರಾ ? ಅಭ್ಯರ್ಥಿ ಕಡೆಯಿಂದ ಆಹ್ವಾನ ಕೊಡಿಸಿದ್ದೀರಾ ? ಬಸನಗೌಡರನ್ನು ಯಾರು ಕರೆದಿದ್ದು ? ಜಿಲ್ಲಾ ಘಟಕದ ಅಧ್ಯಕ್ಷರು ಕರೆದಿಲ್ಲವೇ ಎಂದು ಈಶ್ವರಪ್ಪ ಪ್ರಶ್ನೆಗಳ ಸುರಿಮಳೆಗೈದರು.

ಪಕ್ಷದ ಪ್ರಮುಖರು, ಅವರ ಆಪ್ತರ ಮೂಲಕವೇ ಆಹ್ವಾನ ನೀಡಿದ್ದೇವೆ ಎಂದು ಮುಖಂಡರು ಉತ್ತರಿಸಿದ್ದಕ್ಕೆ ಈಶ್ವರಪ್ಪ ಮತ್ತೊಮ್ಮೆ ಗರಂ ಆದರು.

‘ಬಸನಗೌಡ ಇದೀಗ ಜಿಗಜಿಣಗಿ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಟೀಕೆ ನಡೆಸುತ್ತಿಲ್ಲ. ವರಿಷ್ಠರು ಹೇಳಿದ್ದಾರೆ. ಅದರಂತೆ ನಡೆದುಕೊಳ್ಳುತ್ತಿದ್ದಾರೆ. ನಾನು ಸಹ ಈಚೆಗೆ ಶಿವಮೊಗ್ಗದಲ್ಲಿ ಭೇಟಿಯಾದಾಗ ಚರ್ಚಿಸಿರುವೆ. ನೀವ್ಯಾಕೆ ಹೀಗೆ ಮಾಡುತ್ತಿದ್ದೀರಿ’ ಎಂದು ಈಶ್ವರಪ್ಪ ತಮ್ಮನ್ನು ಭೇಟಿಯಾದ ಗುರು–ಶಿಷ್ಯರಿಗೆ ಖಡಕ್ ಕ್ಲಾಸ್‌ ತೆಗೆದುಕೊಂಡರು ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪಕ್ಕಾ ಲೆಕ್ಕಾಚಾರ..!

ರಮೇಶ ಜಿಗಜಿಣಗಿ ಮಂಗಳವಾರ ಮೂರು ನಾಮಪತ್ರ ಸಲ್ಲಿಸಿದರು. ಮೊದಲ ನಾಮಪತ್ರ ಸಲ್ಲಿಕೆ ಸಂದರ್ಭ ಜಿಲ್ಲೆಯ ಜಾತಿ ಸಮೀಕರಣದ ಪಕ್ಕಾ ಲೆಕ್ಕಾಚಾರ ಗೋಚರಿಸಿತು.

ಅಭ್ಯರ್ಥಿ ರಮೇಶ ಜಿಗಜಿಣಗಿ ದಲಿತ ಸಮುದಾಯ ಪ್ರತಿನಿಧಿಸಿದರೆ, ಮುಖಂಡ ಕೆ.ಎಸ್.ಈಶ್ವರಪ್ಪ ಕುರುಬ ಸಮಾಜವನ್ನು, ವಿಜುಗೌಡ ಪಾಟೀಲ ಪ್ರಬಲ ಪಂಚಮಸಾಲಿ ಸಮುದಾಯವನ್ನು, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಣಜಿಗ ಸಮಾಜವನ್ನು, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ರಡ್ಡಿ ಸಮಾಜವನ್ನು ಪ್ರತಿನಿಧಿಸಿದಂತಿತ್ತು.

ಪಂಚಮಸಾಲಿ, ರಡ್ಡಿ, ದಲಿತ, ಕುರುಬ, ಬಣಜಿಗ ಸಮುದಾಯಗಳು ಜಿಲ್ಲೆಯಲ್ಲಿ ಹೆಚ್ಚಿನ ಜನಸಂಖ್ಯೆ, ಮತದಾರರನ್ನು ಹೊಂದುವ ಮೂಲಕ ರಾಜಕೀಯವಾಗಿಯೂ ಬಲಾಢ್ಯವಾಗಿವೆ. ಎಲ್ಲ ವರ್ಗದ ಜನರ ಮನವೊಲಿಕೆ, ಮತ ಗಳಿಕೆಗಾಗಿ ಬಿಜೆಪಿಯ ಹಿರಿಯ–ಕಿರಿಯ ನಾಯಕರಿಬ್ಬರು ಕೂಡಿ ರೂಪಿಸಿದ ತಂತ್ರಗಾರಿಕೆಯಿದು ಎಂಬುದು ಗೊತ್ತಾಗಿದೆ.

‘ಕುರುಬರ ಬೋಣಿಗೆ’ ಎಂಬ ನಂಬಿಕೆಯಡಿ ನಾಮಪತ್ರಕ್ಕೆ ಮೊದಲ ಸೂಚಕರನ್ನಾಗಿ ಕುರುಬ ಸಮಾಜದ ವ್ಯಕ್ತಿಯನ್ನೇ ಆಯ್ಕೆ ಮಾಡಿ, ಸಹಿ ಪಡೆದಿದ್ದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.