ಹುಬ್ಬಳ್ಳಿ: ಬಿಜೆಪಿಯವರು ಈಗಾಗಲೇ ಮೂರು ಸುತ್ತು ಪ್ರಚಾರ ಮುಗಿಸಿದ್ದಾರೆ. ಪ್ರಚಾರ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಿದ್ದರೂ ಕರಪತ್ರವನ್ನು ಸಹ ನೀಡಿಲ್ಲ. ಹೀಗಾದರೆ ಪ್ರಚಾರ ಮಾಡುವುದಾದರೂ ಹೇಗೆ, ಜನರನ್ನು ತಲುಪುವುದು ಹೇಗೆ ಎಂದು ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು– ಮುಖಂಡರು ಅಲವತ್ತುಕೊಂಡರು.
ಮಂಗಳವಾರ ನಡೆದ ಸೆಂಟ್ರಲ್ ಕ್ಷೇತ್ರದ ಸಭೆಯಲ್ಲಿ ಲೋಕಸಭಾ ಚುನಾವಣೆ ಗೆಲುವಿಗೆ ಕಾರ್ಯಕರ್ತರು ತಮ್ಮ ಸಲಹೆಗಳನ್ನು ನೀಡಿದರು. ಸೆಂಟ್ರಲ್ ಕ್ಷೇತ್ರದಲ್ಲಿ ಬರುವ ವಾರ್ಡ್ಗಳಲ್ಲಿ ಇರುವ ಮುಖಂಡರು– ಕಾರ್ಯಕರ್ತರು ಹಾಗೂ ಕಳೆದ ಬಾರಿ ಪಾಲಿಕೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಭೇಟಿ ಮಾಡಿ ಕೆಲಸ ಮಾಡಲು ಹುರಿದುಂಬಿಸಬೇಕು ಎಂದು ಮುಖಂಡ ಪ್ರಕಾಶ್ ಕ್ಯಾರಕಟ್ಟಿ ಹೇಳಿದರು.
ತಳಮಟ್ಟದ ಕಾರ್ಯಕರ್ತರಾಗಿ ಕೆಲಸ ಮಾಡದ ಮಹೇಶ್ ನಾಲವಾಡ ಅವರಿಗೆ ನೇರವಾಗಿ ಟಿಕೆಟ್ ನೀಡಿದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ಸಕ್ರಿಯರಾಗಿದ್ದ ಅವರು ಸೋತ ನಂತರ ನಿಷ್ಕ್ರಿಯರಾದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅವರಿಗೇ ಟಿಕೆಟ್ ನೀಡಲಾಯಿತು. ಈಗ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿದ್ದಾರೆ ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ ಕುಮಾರ ಪಾಟೀಲ ಹೇಳಿದರು.
ಮಹೇಶ್ ನಾಲವಾಡ ಕಾಂಗ್ರೆಸ್ ಬಿಟ್ಟರೂ ಪಕ್ಷದ ಎಲ್ಲ ಕಾರ್ಯಕರ್ತರು ಪಕ್ಷದಲ್ಲೇ ಇದ್ದಾರೆ. ಆದ್ದರಿಂದ ಚಿಂತೆ ಮಾಡುವ ಅಗತ್ಯ ಇಲ್ಲ. ಪಕ್ಷದ ಪರವಾಗಿ ಇರುವ ಎಲ್ಲರೂ ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಂದು ಕಾರ್ತಕರ್ತರು ಸಲಹೆ ನೀಡಿದರು. ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮುಖಂಡರಾದ ವೀರಣ್ಣ ಮತ್ತೀಕಟ್ಟಿ, ತಾರಾದೇವಿ ವಾಲಿ, ನವೀದ್ ಮುಲ್ಲಾ, ಶಿವ ನಾಯಕ್, ರಾಯನಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.