ಕೋಲ್ಕತ್ತ: ‘ಪ್ರಧಾನಿ ಮೋದಿ ಅವರು ಶಾಸಕರ ಖರೀದಿಯಲ್ಲಿ ತೊಡಗಿಕೊಂಡಿದ್ದು, ವಾರಾಣಸಿ ಕ್ಷೇತ್ರದಿಂದ ಅವರ ನಾಮಪತ್ರವನ್ನು ಅನೂರ್ಜಿತಗೊಳಿಸಬೇಕು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
‘ಟಿಎಂಸಿಯ 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ’ ಎಂದು ಮೋದಿ ಅವರು ಸೋಮವಾರ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಮಮತಾ ಈ ಒತ್ತಾಯ ಮಾಡಿದ್ದಾರೆ.
‘ಜನರು ರಾಷ್ಟ್ರದ ನಾಯಕರನ್ನು ಗೌರವಿಸುತ್ತಾರೆ. ಮೋದಿ ಅದಕ್ಕೆ ಅಪವಾದ. ನಾಚಿಕೆ ಬಿಟ್ಟು ಶಾಸಕರ ಖರೀದಿಯಲ್ಲಿ ತೊಡಗಿರುವ ಅವರಿಗೆ ಪ್ರಧಾನಿಯಾಗಿ ಮುಂದುವರಿಯುವ ಹಕ್ಕು ಇಲ್ಲ’ ಎಂದು ಮಮತಾ ಕಿಡಿಕಾರಿದ್ದಾರೆ.
ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಕಾಲೂರುವ ಕನಸು ಕಾಣುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ಅವರ ಕನಸು ನನಸಾಗದು ಎಂದು ಮಮತಾ ಹೇಳಿದರು.
ಮೋದಿ ಅವರು ಪ್ರಚೋದನಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿದ್ದಾರೆ. ತಮ್ಮ ಹೇಳಿಕೆಗೆ ಪೂರಕ ದಾಖಲೆಗಳನ್ನು ಒದಗಿಸುವಂತೆ ಅವರಿಗೆ ಸೂಚನೆ ನೀಡಬೇಕು, ಇಲ್ಲವಾದಲ್ಲಿ ಅವರ ನಾಮಪತ್ರವನ್ನು ಅನೂರ್ಜಿತಗೊಳಿಸಬೇಕು ಎಂದು ಟಿಎಂಸಿಯು ಚುನಾವಣಾ ಆಯೋಗವನ್ನು ಪತ್ರದ ಮೂಲಕ ಒತ್ತಾಯಿಸಿದೆ.
‘ಮೋದಿಗೆ 72 ವರ್ಷ ನಿಷೇಧ ವಿಧಿಸಿ’
ಲಖನೌ (ಪಿಟಿಐ): ‘ಟಿಎಂಸಿಯ 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ’ ಎಂಬ ಮೋದಿ ಅವರ ಹೇಳಿಕೆಯನ್ನು ಟೀಕಿಸಿದ ಎಸ್ಪಿ ಮುಖಂಡ ಅಖಿಲೇಶ್ ಯಾದವ್, ‘ಇಂಥ ನಾಚಿಕೆಗೇಡಿ ಭಾಷಣ ಮಾಡಿದ ಮೋದಿಗೆ 72 ವರ್ಷಗಳ ನಿಷೇಧ ಹೇರಬೇಕು’ ಎಂದಿದ್ದಾರೆ.
ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಯೋಗಿ ಆದಿತ್ಯನಾಥ, ಸಿಧು ಮುಂತಾದ ಕೆಲವು ನಾಯಕರಿಗೆ ಚುನಾವಣಾ ಆಯೋಗ 72 ಗಂಟೆಗಳ ಪ್ರಚಾರ ನಿಷೇಧ ಶಿಕ್ಷೆ ವಿಧಿಸಿತ್ತು.
‘ಅಭಿವೃದ್ಧಿ ಕೇಳುತ್ತಿದೆ... ನೀವು ಪ್ರಧಾನಿಯವರ ನಾಚಿಕೆಗೇಡಿ ಭಾಷಣ ಕೇಳಿದಿರಾ? ದೇಶದ 125 ಕೋಟಿ ಜನರ ವಿಶ್ವಾಸ ಕಳೆದುಕೊಂಡ ಬಳಿಕ, ಅವರೀಗ 40 ಶಾಸಕರು ನೀಡಿದ್ದಾರೆ ಎನ್ನಲಾದ ಪಕ್ಷಾಂತರದ ಅನೈತಿಕ ಭರವಸೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಅವರ ಕಪ್ಪುಹಣದ ಮನಸ್ಥಿತಿಯನ್ನು ತಿಳಿಸುತ್ತದೆ’ ಎಂದು ಅಖಿಲೇಶ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.