ADVERTISEMENT

ಜೇವರ್ಗಿ: ಧರ್ಮಸಿಂಗ್ ವಿರುದ್ಧ ಗೆದ್ದಿದ್ದ ದೊಡ್ಡಪ್ಪಗೌಡ ಜೆಡಿಎಸ್‌ನಿಂದ ಕಣಕ್ಕೆ

ದಿಂದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 9:47 IST
Last Updated 13 ಏಪ್ರಿಲ್ 2023, 9:47 IST
ಕಲಬುರಗಿಯಲ್ಲಿ ಬುಧವಾರ ರಾತ್ರಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದರು
ಕಲಬುರಗಿಯಲ್ಲಿ ಬುಧವಾರ ರಾತ್ರಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದರು   

ಕಲಬುರಗಿ: ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬುಧವಾರ ಭೇಟಿಯಾದರು.

‘ತಮ್ಮ ಆಪ್ತರೊಂದಿಗೆ ನಗರದ ಹೋಟೆಲ್‌ನಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಜೇವರ್ಗಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವ ಕುರಿತು ಚರ್ಚಿಸಿದ್ದಾರೆ. ಟಿಕೆಟ್ ನೀಡುವ ಆಶ್ವಾಸನೆ ಸಿಕ್ಕಿದ್ದು, ಗುರುವಾರ ಅಧಿಕೃತವಾಗಿ ಜೆಡಿಎಸ್‌ ಸೇರುವ ಸಾಧ್ಯತೆ ಇದೆ’ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಜೇವರ್ಗಿಯಲ್ಲಿ ತಮ್ಮ ಸಾವಿರಾರು ಬೆಂಬಲಿಗರು ಮತ್ತು ಅಭಿಮಾನಿಗಳ ಸಭೆ ನಡೆಸಿದ ಅವರು, ‘ನಮ್ಮ ತಂದೆ ದಿ.ಶಿವಲಿಂಗಪ್ಪ ಪಾಟೀಲ ನರಿಬೋಳ ಸೇರಿ ನೂರಾರು ಮುಖಂಡರು ಜೊತೆಗೂಡಿ ತಾಲ್ಲೂಕಿನಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೆವು. ಆದರೆ, ಪಕ್ಷದ ಕಟ್ಟಿದ್ದ ನನಗೇನೆ ಟಿಕೆಟ್ ನಿರಾಕರಿಸಲಾಗಿದೆ. ನನ್ನ ಏಳಿಗೆ ಸಹಿಸದ ಕೆಲವರು ಟಿಕೆಟ್ ತಪ್ಪಿಸಿದ್ದಾರೆ’ ಎಂದರು.

ADVERTISEMENT

‘ಅಧಿಕಾರ ಇದ್ದರೂ ಇಲ್ಲದಿದ್ದರೂ ಜನರ ಸೇವೆ ಮಾಡುವೆ. ಕಷ್ಟ–ಸುಖಗಳಲ್ಲಿ ಭಾಗಿಯಾಗುವೆ. ಆದರೆ, ಬೆಂಬಲಿಗರು ಮತ್ತು ಅಭಿಮಾನಿಗಳ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ’ ಎಂದರು.

ಧರ್ಮಸಿಂಗ್‌ ವಿರುದ್ಧ 70 ಮತಗಳಿಂದ ಗೆದ್ದಿದ್ದರು
2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಅವರನ್ನು 70 ಮತಗಳಿಂದ ಸೋಲಿಸಿದ್ದರು. 2013 ಮತ್ತು 2018ರ ಚುನಾವಣೆಯಲ್ಲಿ ಧರ್ಮಸಿಂಗ್ ಪುತ್ರ ಅಜಯ ಸಿಂಗ್ ವಿರುದ್ಧ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.