ನಾನು ಏಳೆ೦ಟು ಚುನಾವಣೆಗಳಲ್ಲಿ ಮತ ಚಲಾಯಿಸಿದ್ದೇನೆ. ರಾಜ್ಯವು ಹಿಂದೆ ಎದುರಿಸಿರುವ, ಪ್ರಸ್ತುತ ಎದುರಿಸುತ್ತಿರುವ ಮತ್ತು ಮುಂದೆಯೂ ಎದುರಿಸಬಹುದಾದ ಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರು, ಉತ್ತಮ ಗುಣಮಟ್ಟದ ಶಿಕ್ಷಣ, ನೀರಾವರಿ ಯೋಜನೆಗಳು, ರಸ್ತೆ ಅಭಿವೃದ್ಧಿಯಂತಹ ವಿಷಯಗಳ ಬಗ್ಗೆ ಗೆದ್ದ ಅಭ್ಯರ್ಥಿಗಳು ಮಾತನಾಡುವುದೇ ಇಲ್ಲ. ಎಲ್ಲ ವರ್ಗದ ಜನರೂ ಒಂದೇ ಎಂದು ಭಾವಿಸಿ ಅವರ ಅಭಿವೃದ್ಧಿಗಾಗಿ ಶ್ರಮಿಸುವ ಮಾತುಗಳೇ ಅವರಿಂದ ಬರುತ್ತಿಲ್ಲ. ಇಂತಹವರಿಂದ ಏನು ನಿರೀಕ್ಷಿಸಲು ಸಾಧ್ಯ?
ಇಲ್ಲಿ ಮತದಾರರಾದ ನಾವು ಮೊದಲು ಬದಲಾಗಬೇಕು. ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು ಸಮಾಜದ ಸೇವೆಗಾಗಿಯೇ ರಾಜಕಾರಣಕ್ಕೆ ಬಂದಿರುತ್ತೇನೆ ಎಂದು ಪ್ರಮಾಣ ಮಾಡುವವರು ನಮ್ಮ ಆಯ್ಕೆಯಾಗಬೇಕು. ಜಾತಿವಾರು ಆಡಳಿತಕ್ಕೆ ಜೋತು ಬೀಳದೆ, ಉಚಿತ ಮತ್ತು ಮನ್ನಾ ಭಾಗ್ಯಗಳನ್ನು ಹೋಗಲಾಡಿಸುವ ರಾಜಕಾರಣಿಗಳ ಅವಶ್ಯಕತೆ ಈಗ ಹೆಚ್ಚಾಗಿದೆ. ರಾಜ್ಯದ ರಾಜಕಾರಣದಲ್ಲಿ ಹೊಸ ಮುಖಗಳು ಕಂಡುಬರದೇ ಇರುವುದು ಬೇಸರದ ಸಂಗತಿ. ಹಲವು ಬಾರಿ ಗೆದ್ದವರನ್ನೇ ನಾವು ಇನ್ನೂ ಆರಿಸಿ ಕಳುಹಿಸುತ್ತಿರುವುದು ವಿಪರ್ಯಾಸವೇ ಸರಿ.
–ರಾಮಪ್ಪ ಗುಡಿಗೇರಿ, ಕೊಪ್ಪಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.