ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸುತ್ತೇವೆ ಎಂದು ಹೇಳುತ್ತಿದ್ದರೂ ಅದು ಕಷ್ಟ ಎಂಬುದು ಕಾಂಗ್ರೆಸ್ಗೆ ತಿಳಿದಿತ್ತು. ಹಾಗಾಗಿಯೇ ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಂಡಿತ್ತು.
78 ಶಾಸಕರಿರುವ ಕಾಂಗ್ರೆಸ್, 38 ಶಾಸಕರಿರುವ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವುದರ ಹಿಂದೆ ಸೋನಿಯಾ ಗಾಂಧಿ, ಸೀತಾರಾಂ ಯೆಚೂರಿ, ಮಮತಾ ಬ್ಯಾನರ್ಜಿ, ಮಾಯಾವತಿ ಮೊದಲಾದವರ 'ಸಲಹೆ'ಗಳಿವೆ ಎಂದು ಹೇಳಲಾಗುತ್ತಿದೆ.
ಬಹುಮತ ಸಿಗದೇ ಇದ್ದರೆ ಸಮಯ ವ್ಯರ್ಥ ಮಾಡದೆ ಜೆಡಿಎಸ್ ಜತೆ ಕೈ ಜೋಡಿಸಿ ಅಧಿಕಾರಕ್ಕೇರುವ ಬಗ್ಗೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಸೋನಿಯಾಗಾಂಧಿ, ರಾಹುಲ್, ಪ್ರಿಯಾಂಕಾ, ಅಹಮದ್ ಪಟೇಲ್ ಭಾಗಿಯಾಗಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಸೋನಿಯಾ, ಪ್ರಿಯಾಂಕಾ, ಗುಲಾಂ ನಬೀ ಆಜಾದ್, ಅಶೋಕ್ ಗೆಲ್ಹೋಟ್ ಮೊದಲಾದ ಕಾಂಗ್ರೆಸ್ ನಾಯಕರು ಸೇರಿದಂತೆ ಟಿಡಿಪಿ,ಟಿಆರ್ಎಸ್,ಬಿಎಸ್ಪಿ, ತೃಣಮೂಲ ಕಾಂಗ್ರೆಸ್, ಸಿಪಿಎಂ ಪಕ್ಷಗಳ ನಾಯಕರು ಕೂಡಾ ಬಿಜೆಪಿ ವಿರುದ್ಧದ ತಂತ್ರಗಾರಿಕೆಯಲ್ಲಿ ಭಾಗಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.