ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲಿನ ಶಿವಮೊಗ್ಗ ಜನರಿಗೆ ನನ್ನ ನಮಸ್ಕಾರಗಳು. ಕದಂಬ, ಕೆಳದಿ ಶಿವಪ್ಪ ನಾಯಕ, ರಾಷ್ಟ್ರಕವಿ ಕುವೆಂಪು, ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡ ಅವರಿಗೆ ನನ್ನ ನಮಸ್ಕಾರಗಳು ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಮಾತು ಆರಂಭಿಸಿದರು.
ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.
ನನಗೆ ಶಿವಮೊಗ್ಗ ಜತೆ ಪುರಾತನ ಸಂಬಂಧ ಇದೆ. 1991ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಆಯೋಜಿಸಿದ್ದ ಯಾತ್ರೆ ವೇಳೆ ಶಿವಮೊಗ್ಗಕ್ಕೆ ಬಂದಿದ್ದೆ. ಆ ದಿನವನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು(ಸಬ್ ಕಾ ಸಾತ್, ಸಬ್ ಕಾ ವಿಕಾಸ್) ಎಂಬ ವಾಣಿಯನ್ನು ರಾಷ್ಟ್ರಕವಿ ಕುವೆಂಪು ಅವರು ಕೊಟ್ಟಿದ್ದಾರೆ. ಇದು ನಮ್ಮ ಆಶಯ. ಕಾಂಗ್ರೆಸ್ ಜಾತಿ ವಿಭಜಿಸುವ ಕೆಲಸ ಮಾಡುತ್ತಿದೆ. ಉತ್ತರ ದಕ್ಷಿಣ, ಸಂಪ್ರದಾಯ, ಸಂಸ್ಕೃತಿ ಹೆಸರಲ್ಲಿ ವಿಭಜಿಸುತ್ತಿದೆ. ಜಾತಿ ಮತದ ಆಧಾರದ ಮೇಲೆ ಅಪರಾಧಿಗಳನ್ನು ನಿರ್ಧೋಷಿಗಳು ಎಂದು ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ ಅವರು, ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತಿದೆ ಇದಕ್ಕೆ ಯಾರು ಹೊಣೆ ಎಂದು ಕಾಂಗ್ರೆಸ್ಗೆ ಕೇಳುತ್ತೇನೆ. ಕೋಮುವಾದ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಬಿಹಾರ ಆರೋಗ್ಯ ಮಂತ್ರಿ ಮಂಗಳ ಪಾಂಡೆ, ಸಂಸದ ಬಿ.ವೈ. ರಾಘವೇಂದ್ರ, ಆಯನೂರು ಮಂಜುನಾಥ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.