ADVERTISEMENT

ಕೆ‍ಪಿಸಿಸಿ ಚುನಾವಣಾ ಸಮಿತಿ ಸಭೆ: ಸೋತ 90 ಕ್ಷೇತ್ರಗಳಿಗೆ ಟಿಕೆಟ್‌ ಹಂಚಿಕೆ ಚರ್ಚೆ

ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 18:30 IST
Last Updated 14 ಮಾರ್ಚ್ 2018, 18:30 IST
ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ಜಿ. ಪರಮೇಶ್ವರ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಚಿತ್ರದಲ್ಲಿ ಇದ್ದಾರೆ
ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ಜಿ. ಪರಮೇಶ್ವರ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಚಿತ್ರದಲ್ಲಿ ಇದ್ದಾರೆ   

ಬೆಂಗಳೂರು: ರಾಜ್ಯ ವಿಧಾನಸಭೆಗೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಕಂಡ 90 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಕುರಿತು ಕೆ‍ಪಿಸಿಸಿ ಚುನಾವಣಾ ಸಮಿತಿ ಬುಧವಾರ ಚರ್ಚೆ ನಡೆಸಿದೆ.

ಗೆಲುವೊಂದೇ ಮುಖ್ಯ ಮಾನದಂಡ ಮಾಡಿಕೊಂಡು ಟಿಕೆಟ್‌ ಆಕಾಂಕ್ಷಿಗಳ ಸಾಮರ್ಥ್ಯ ಮೌಲ್ಯಮಾಪನ ನಡೆಸಿದ ಸಮಿತಿ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದೆ.

ಸಭೆ‌ಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳ ಕುರಿತು ಚರ್ಚಿಸಿದ್ದೇವೆ’ ಎಂದರು.

ADVERTISEMENT

‘ಹಾಲಿ ಶಾಸಕರು, ಪಕ್ಷೇತರರು ಗೆದ್ದಿರುವ ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಕುರಿತು ಚರ್ಚಿಸಲು ಇದೇ 26ರಂದು ಮತ್ತೆ ಸಭೆ ಸೇರುತ್ತೇವೆ. ಟಿಕೆಟ್‌ ನೀಡುವಾಗ ಸಾಮಾಜಿಕ ನ್ಯಾಯವನ್ನೂ ಪರಿಗಣಿಸುತ್ತೇವೆ. ಕಳಂಕಿತರು, ಆರೋಪಿಗಳು ಆಕಾಂಕ್ಷಿಗಳಾಗಿದ್ದರೆ ಅಂಥವರ ಬಗ್ಗೆ ಚುನಾವಣಾ ಪರಿಶೀಲನಾ ಸಮಿತಿ ತೀರ್ಮಾನಿಸಲಿದೆ’ ಎಂದರು.

‘ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದೆ. ಉತ್ತಮ ವ್ಯಕ್ತಿತ್ವ ಹೊಂದಿರುವ, ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಈ ತಿಂಗಳ ಅಂತ್ಯದೊಳಗೆ ಕನಿಷ್ಠ 100 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲು ಹೈಕಮಾಂಡ್‌ ಉದ್ದೇಶಿಸಿದೆ.

ಸಭೆಯ ಆರಂಭದಲ್ಲಿ ಸಮಿತಿ ಸದಸ್ಯರನ್ನು ಐದು ವಿಭಾಗಗಳಾಗಿ ವಿಂಗಡಿಸಲಾಯಿತು. ಪ್ರತಿ ವಿಭಾಗದಲ್ಲಿ ತಲಾ ಕನಿಷ್ಠ ಎಂಟು ಸದಸ್ಯರನ್ನು ನೇಮಿಸಿ, ಆಯಾ ವಿಭಾಗದಲ್ಲಿ ಬರುವ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಅರ್ಜಿಗಳನ್ನು ಪರಿಶೀಲಿಸಲಾಯಿತು. ಐದು ಮಾನದಂ
ಡಗಳನ್ನು ಪರಿಗಣಿಸಿ ಪ್ರತಿ ಕ್ಷೇತ್ರಕ್ಕೆ 2–3 ಸಂಭಾವ್ಯ ಹೆಸರುಗಳನ್ನು ಪಟ್ಟಿ ಮಾಡ
ಲಾಗಿದೆ.

ಇದೇ 28ರಂದು ದೆಹಲಿಯಲ್ಲಿ ನಡೆಯಲಿರುವ ಚುನಾವಣಾ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ಪಟ್ಟಿ ಬಗ್ಗೆ ಚರ್ಚೆಯಾಗಲಿದೆ. ಬಳಿಕ ವರಿಷ್ಠರು ಹೆಸರು ಅಂತಿಮಗೊಳಿಸಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

***

ಮಾನದಂಡ

l ಭ್ರಷ್ಟರಿಗೆ ಟಿಕೆಟ್‌ ನಿರಾಕರಣೆ

l ಗೆಲ್ಲುವ ಅಭ್ಯರ್ಥಿಗೆ ಮಣೆ (ವಯಸ್ಸಿನ ಮಿತಿ ಇಲ್ಲ)

l ಒಂದು ಕುಟುಂಬಕ್ಕೆ ಒಂದು ಟಿಕೆಟ್ ನಿಯಮ ಸಡಿಲಿಕೆ

l 2013ರಲ್ಲಿ 25,000 ಮತಗಳ ಅಂತರದಲ್ಲಿ ಸೋತವರು, ಗೆಲ್ಲುವ ಬಗ್ಗೆ ಸಮೀಕ್ಷೆ ಮಾಹಿತಿ ನೀಡಿದ್ದರೆ ಅಂಥವರಿಗೆ ಅವಕಾಶ

l ಅಭ್ಯರ್ಥಿ ಅಂತಿಮ: ಹೈಕಮಾಂಡ್‌ ತೀರ್ಮಾನಕ್ಕೆ

***

ವಿಭಾಗವಾರು ಚುನಾವಣಾ ಸಮಿತಿ

ಬೆಂಗಳೂರು : ಡಿ.ಕೆ. ಶಿವಕುಮಾರ್, ವೀರಪ್ಪ ಮೊಯಿಲಿ, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಎಂ. ಕೃಷ್ಣಪ್ಪ, ಸಿ.ಎಂ. ಇಬ್ರಾಹಿಂ, ಕೃಷ್ಣ ಬೈರೇಗೌಡ, ಎಸ್.ಎಸ್. ಮಲ್ಲಿಕಾರ್ಜುನ್, ರೋಷನ್ ಬೇಗ್, ಎಚ್.ಎಸ್. ಮಂಜುನಾಥ, ಕೆ.ಪಿ. ಕೃಷ್ಣ ಮೂರ್ತಿ, ಡಿ.ಕೆ. ಸುರೇಶ್, ಎಸ್.ಪಿ. ಮುದ್ದು ಹನುಮೇಗೌಡ, ಬಿ.ಎನ್. ಚಂದ್ರಪ್ಪ, ಪ್ರೊ. ರಾಜೀವ್ ಗೌಡ, ಕೆ.ಸಿ. ರಾಮಮೂರ್ತಿ

ಮೈಸೂರು: ದಿನೇಶ್ ಗುಂಡೂರಾವ್, ಕೆ.ಎಚ್. ಮುನಿಯಪ್ಪ, ರೆಹಮಾನ್ ಖಾನ್, ಬಿ. ರಮಾನಾಥ ರೈ, ಎಚ್.ಸಿ. ಮಹದೇವಪ್ಪ, ಬಿ.ಎಲ್. ಶಂಕರ್, ಮೋಟಮ್ಮ, ರಾಣಿ ಸತೀಶ್, ವಿಜಯಕುಮಾರ್ ಸೊರಕೆ, ಎಂ.ಎಚ್. ಅಂಬರೀಷ್‌, ಆರ್. ಧ್ರುವನಾರಾಯಣ್

ಬೆಳಗಾವಿ: ಎಸ್.ಆರ್. ಪಾಟೀಲ, ಮಾರ್ಗರೆಟ್ ಆಳ್ವ, ಆರ್.ವಿ. ದೇಶಪಾಂಡೆ, ಎಚ್. ಕೆ. ಪಾಟೀಲ, ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ, ಸಿ.ಎಸ್‌. ನಾಡಗೌಡ, ಸಲೀಂ ಅಹಮದ್, ಉಮಾಶ್ರೀ, ಲಕ್ಷ್ಮೀ ಹೆಬ್ಳಾಳ್ಕರ, ಪ್ರಕಾಶ ಹುಕ್ಕೇರಿ

ಕಲಬುರ್ಗಿ: ಬಿ.ಕೆ. ಹರಿಪ್ರಸಾದ್, ಅಲ್ಲಂ ವೀರಭದ್ರಪ್ಪ, ಸಂತೋಷ್ ಲಾಡ್, ಪಿ.ಟಿ. ಪರಮೇಶ್ವರ್ ನಾಯ್ಕ್, ಶಿವರಾಜ್ ತಂಗಡಗಿ, ಬಸವನಗೌಡ ಬಾದರ್ಲಿ, ವಿ.ವಿ. ನಾಯಕ್

***

ಜನರಿಗೆ ಸುಸ್ತಾಗಿದೆ’
‘ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಲೋಕಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಾತು ಕೇಳಿ ಜನ ಸುಸ್ತಾಗಿದ್ದಾರೆ’ ಎಂದು ದಿನೇಶ್‌ ಗುಂಡೂರಾವ್‌ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.