ಗದಗ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಶೇ 26ರಷ್ಟು ಮತದಾನವಾಗಿದೆ.
ಶಿರಹಟ್ಟಿ ಮತಕ್ಷೇತ್ರದಲ್ಲಿ ಶೇ 22, ರೋಣ ಮತಕ್ಷೇತ್ರದಲ್ಲಿ ಶೇ 27, ನರಗುಂದ ಕ್ಷೇತ್ರದಲ್ಲಿ ಶೇ 25ರಷ್ಟು ಮತ್ತು ಗದಗ ಕ್ಷೇತ್ರದಲ್ಲಿ ಶೇ 28ರಷ್ಟು ಮತದಾನವಾಗಿದೆ.
ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ ಪಾಟೀಲ ಅವರು ಸ್ವಗ್ರಾಮ ಹುಲಕೋಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯ 133ರಲ್ಲಿ ತಾಯಿ ಪದ್ಮಮ್ಮ ಅವರೊಂದಿಗೆ ಬಂದು ಮತ ಚಲಾಯಿಸಿದರು. ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು ಗದುಗಿನ ಬಸವೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆ, ಮತಗಟ್ಟೆ ಸಂಖ್ಯೆ 85ರಲ್ಲಿ ಮತ ಚಲಾಯಿಸಿದರು.
ರೋಣ ತಾಲ್ಲೂಕಿನ ಬೆಳವಣಿಕಿ, ಚಿಕ್ಕಹಂದಿಗೋಳ ಗ್ರಾಮದ ಮತಗಟ್ಟೆ ಸಂಖ್ಯೆ 131ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮತದಾನ ಪ್ರಾರಂಭವಾಗಲು ಸ್ವಲ್ಪ ವಿಳಂಬವಾಯಿತು. ಮತಗಟ್ಟೆ ಸಿಬ್ಬಂದಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಮುಂಡರಗಿ ಪಟ್ಟಣದ 42ನೇ ಮತಗಟ್ಟೆಯಲ್ಲಿ ಸಾರ್ವಜನಿಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ನರಗುಂದ: ಪಟ್ಟಣದ ಅಧ್ಯಾಪಕ ನಗರದ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ವಿವಿಪ್ಯಾಟ್ ಯಂತ್ರದ ಬಳಿ ನಿಂತು, ಮತದಾರರಿಗೆ ನಿರ್ದೇಶನ ಮಾಡುತ್ತಿದ್ದಾರೆ ಎಂದು ನರಗುಂದ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ ಆರೋಪಿಸಿದರು. ಅಲ್ಲಿಂದಲೇ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರಿಗೆ ಕರೆ ಮಾಡಿ, ಈ ಅಧಿಕಾರಿಯನ್ನು ಬದಲಿಸುವಂತೆ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.