ADVERTISEMENT

ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

​ಪ್ರಜಾವಾಣಿ ವಾರ್ತೆ
Published 10 ಮೇ 2018, 12:33 IST
Last Updated 10 ಮೇ 2018, 12:33 IST
ಸುನಿಲ್‌ ಕುಮಾರ್‌
ಸುನಿಲ್‌ ಕುಮಾರ್‌   

ಬೆಂಗಳೂರು: ವಿಧಾನಸಭಾ ಚುನಾವಣೆಯ ಮತದಾನ ಇದೇ 12ಕ್ಕೆ ನಡೆಯಲಿದ್ದು, ಬಹಿರಂಗ ಪ್ರಚಾರ ಗುರುವಾರ (ಮೇ 10) ಸಂಜೆ 5ಕ್ಕೆ ಕೊನೆಯಾಗಲಿದೆ.

ಈ ಅವಧಿಯ ಬಳಿಕ ರಾಜಕೀಯ ನಾಯಕರು ತಮ್ಮ ಕ್ಷೇತ್ರ ಬಿಟ್ಟು ಹೊರಗಿನ ಪ್ರದೇಶಗಳಲ್ಲಿ ಮತ ಕೇಳುವಂತಿಲ್ಲ. ಅಭ್ಯರ್ಥಿಗಳನ್ನು ಬಿಟ್ಟು, ಮತದಾರರಲ್ಲದವರು ವಿಧಾನಸಭಾ ಕ್ಷೇತ್ರದಲ್ಲಿ ಇರುವಂತಿಲ್ಲ. ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಕೇಳಲು ಮಾತ್ರ ಅವಕಾಶ ಇರುತ್ತದೆ.

ಚುನಾವಣೆ: ಇಂದಿನಿಂದ ನಿಷೇಧಾಜ್ಞೆ

ADVERTISEMENT

ವಿಧಾನಸಭಾ ಚುನಾವಣೆಗೆ ಮುಂಜಾಗ್ರತಾ ಕ್ರಮವಾಗಿ ಗುರುವಾರ (ಮೇ 10)ಸಂಜೆ 6 ಗಂಟೆಯಿಂದ ಮೇ 13ರ ಸಂಜೆ 6ರ ವರೆಗೆ ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್‌ ಕಮಿಷನರ್‌ ಟಿ.ಸುನಿಲ್‌ಕುಮಾರ್ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡಗಳು ಮೆರವಣಿಗೆ ಹಾಗೂ ಪ್ರತಿಭಟನೆ ಮಾಡಬಾರದು. ಶಸ್ತ್ರ, ಕುಡುಗೋಲು, ಖಡ್ಗ, ಚೂರಿ, ಬಂದೂಕು ಹಾಗೂ ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಮತದಾನದ ಹಿಂದಿನ 48 ಗಂಟೆಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹತ್ತು ಜನ ಮೀರದಂತೆ ಮನೆಮನೆಗೆ ಭೇಟಿ ನೀಡಿ, ಚುನಾವಣಾ ಪ್ರಚಾರ ಮಾಡಲು ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ.

ಶವ ಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ, ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಹೋಗುವವರಿಗೆ ಹಾಗೂ ಅನುಮತಿ ಪಡೆದ ಸಮಾರಂಭಗಳಿಗೆ ನಿಷೇಧಾಜ್ಞೆ ಅನ್ವಯಿಸುವುದಿಲ್ಲ ಎಂದು ಕಮಿಷನರ್‌ ಸ್ಪಷ್ಟಪಡಿಸಿದ್ದಾರೆ.

ಪ್ರಚಾರಕ್ಕೆ ಹೋದವರ ಮೊಬೈಲ್, ಪರ್ಸ್‌ ಕಳವು

ಹೆಬ್ಬಾಳ ಅಭ್ಯರ್ಥಿ ಪರ ಚುನಾವಣೆ ಪ್ರಚಾರ ನಡೆಸುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಬಿಜೆಪಿ ಕಾರ್ಯಕರ್ತರ ಮೊಬೈಲ್ ಹಾಗೂ ಪರ್ಸ್‌ ಕಳವು ಮಾಡಿದ್ದಾರೆ.

ಆರ್‌.ಟಿ. ನಗರದ ಸಿಐಎ ಬಡಾವಣೆ ಸಮೀಪ ನಾರಾಯಣ ಸ್ಕೂಲ್‌ ಬಳಿ ಮನೆಮನೆ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತ ರಾಜೇಶ್‌ ಅವರ ಮೊಬೈಲ್‌  ಹಾಗೂ ಸನ್‌ರೈಸ್ ಕಾಲೊನಿ ಸಮೀಪ ಗೌರಿ ಅವರ ಪರ್ಸ್‌ ಅನ್ನು ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು ಎಗರಿಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.