ADVERTISEMENT

ತಿಪ್ಪೇಸ್ವಾಮಿಗೆ ಕಾಂಗ್ರೆಸ್‌ ಗಾಳ?

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ಎಸ್. ತಿಪ್ಪೇಸ್ವಾಮಿ
ಎಸ್. ತಿಪ್ಪೇಸ್ವಾಮಿ   

ಮೊಳಕಾಲ್ಮುರು/ಚಿತ್ರದುರ್ಗ: ಸಂಸದ ಬಿ. ಶ್ರೀರಾಮುಲು ಅವರಿಗೆ ಮೊಳಕಾಲ್ಮುರು ಕ್ಷೇತ್ರದ ಬಿಜೆಪಿ ಟಿಕೆಟ್‌ ನೀಡಿರುವ ಹಿನ್ನೆಲೆಯಲ್ಲಿ ಬಂಡೆದ್ದಿರುವ ಹಾಲಿ ಶಾಸಕ ಎಸ್‌. ತಿಪ್ಪೇಸ್ವಾಮಿ ಅವರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ ಎಂಬವದಂತಿ ಗುರುವಾರ ಕ್ಷೇತ್ರದಾದ್ಯಂತ ಹರಡಿತ್ತು.

ತಿಪ್ಪೇಸ್ವಾಮಿ ಬೆಂಬಲಿಗರು ‘ಬಳ್ಳಾರಿ ಚಲೋ’ ನಡೆಸಿದರೂ ಶ್ರೀರಾಮುಲು ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ತಿಪ್ಪೇಸ್ವಾಮಿ ಅವರ ಕೆಲವು ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇನ್ನು ಕೆಲವರು, ಈ ಹಿಂದೆ ಕಾಂಗ್ರೆಸ್‌ ಸೇರುವಂತೆ ಪಕ್ಷವು ನೀಡಿದ್ದ ಆಹ್ವಾನವನ್ನು ಈಗ ಪರಿಗಣಿಸುವಂತೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

ಪಕ್ಷಕ್ಕೆ ಸೇರಿಸಿಕೊಳ್ಳಲು, ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಎಚ್. ಆಂಜನೇಯ ಅವರು ಜಗಳೂರು ಶಾಸಕ ಹಾಗೂ ತಿಪ್ಪೇಸ್ವಾಮಿ
ಅವರ ಅಳಿಯ ಎಚ್‌.ಪಿ. ರಾಜೇಶ್‌ ಅವರ ಮೂಲಕ ಪ್ರಯತ್ನ ನಡೆಸಿದ್ದಾರೆ. ಅವರು ಸೇರಿದರೆ ಮೊಳಕಾಲ್ಮುರಿನ ಕಾಂಗ್ರೆಸ್ ಟಿಕೆಟ್‌ ಕೊಡುವ ಭರವಸೆಯನ್ನೂ ನೀಡಲಾಗುತ್ತಿದೆ ಎಂದು ತಿಪ್ಪೇಸ್ವಾಮಿ ಆಪ್ತ ವಲಯದ ಒಬ್ಬರುತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಶಾಸಕ ತಿಪ್ಪೇಸ್ವಾಮಿ, ‘ಈವರೆಗೂ ಕಾಂಗ್ರೆಸ್‌ನ ಯಾವುದೇ ಮುಖಂಡರು ನನ್ನನ್ನು ಸಂಪರ್ಕಿಸಿಲ್ಲ. ಆದರೆ ಕಾಂಗ್ರೆಸ್‌ನ ಹಲವು ಮುಖಂಡರು ‘ಸೇರ್ಪಡೆ ಮಾಡಿಸೋಣ’ ಎಂದು ಮಾತನಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಇದು ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಹೊಂದಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕಾದು ನೋಡಿ, ಮುಂದಿನ ನಡೆ ಏನೆಂದು ನಿರ್ಧರಿಸಲಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.