ಮತದಾನ ಎನ್ನುವುದು ನಮ್ಮ ಪ್ರಾಥಮಿಕ ಅಧಿಕಾರ. ನಾವು ಏನಾದರೂ ಸಮಸ್ಯೆಗಳಾದಾಗ ನಾಯಕರನ್ನು ಬೈಯುತ್ತೇವಲ್ಲ? ನಾವು ಮತದಾನ ಮಾಡಿಲ್ಲ ಎಂದರೆ ಅವರಿಗೆ ಬೈಯುವ ನೈತಿಕ ಹಕ್ಕೇ ನಮಗಿರುವುದಿಲ್ಲ. ನಮ್ಮನ್ನು ಆಳುವವರನ್ನು ಪ್ರಶ್ನಿಸುವ ಅಧಿಕಾರ ನಮಗೆ ಸಿಗುವುದು ಮತದಾನದಿಂದ.
ನಾವೆಲ್ಲ ಮತ ಚಲಾಯಿಸಿ ಪ್ರಜಾಪ್ರತಿನಿಧಿಗಳಿಗೆ ಕೊಡುವ ಅಧಿಕಾರ ಬೆಂಕಿಪೊಟ್ಟಣ ಇದ್ದ ಹಾಗೆ. ಅಂಥ ಬೆಂಕಿಪೊಟ್ಟಣವನ್ನು ಯಾರ ಕೈಗೆ ಕೊಡುತ್ತೇವೆ? ದೀಪ ಹಚ್ಚುವವರ ಕೈಗೆ ಕೊಡಬೇಕೋ, ಬೆಂಕಿ ಹಚ್ಚುವವರ ಕೈಗೆ ಕೊಡಬೇಕೋ ಎನ್ನುವುದನ್ನೂ ಯೋಚಿಸಬೇಕು. ನಾವೊಬ್ಬರು ಮತ ಹಾಕದೇ ಇರುವುದರಿಂದ ದೀಪ ಹಚ್ಚುವವರ ಕೈಗೆ ಸಿಗಬೇಕಾದ ಅಧಿಕಾರ ಬೆಂಕಿ ಹಚ್ಚುವವರ ಕೈಗೋ, ದೊಂಬಿ ಏಳಿಸುವವರ ಕೈಗೋ ಸಿಕ್ಕಿಬಿಟ್ಟರೆ ಇಡೀ ಸಮಾಜದ ಸ್ವಾಸ್ಥ್ಯವೇ ಹಾಳಾಗುತ್ತದೆ. ಅದಕ್ಕೆ ನಾವೇ ನೇರ ಕಾರಣ ಆಗಿಬಿಡುತ್ತೇವೆ.
‘ನಮ್ಮ ಒಂದು ಮತದಿಂದ ಏನಾಗಿಬಿಡುತ್ತದೆ’ ಎಂದುಕೊಳ್ಳುತ್ತಿರುತ್ತೇವೆ. ನಮ್ಮ ಹಾಗೆ ಇನ್ನೂ ಹತ್ತು ಜನ ಯೋಚಿಸಿದಾಗ, ಸಾವಿರ ಜನ ಯೋಚಿಸಿದಾಗ ಅದರ ಪರಿಣಾಮವೂ ದೊಡ್ಡದಾಗುತ್ತದೆ. ಸಮಾಜಕ್ಕೆ ಒಳ್ಳೆಯದಾಗುವುದನ್ನು ನಾವೇ ತಡೆದ ಹಾಗಾಗುತ್ತದೆ. ಹಾಗಾಗಿ ಎಲ್ಲರೂ ಯೋಚನೆ ಮಾಡಿ ಮತದಾನ ಮಾಡಲೇಬೇಕು. ದೀಪ ಹಚ್ಚುವವರ ಕೈಗೇ ಅಧಿಕಾರ ಕೊಡಬೇಕು.
– ಧನಂಜಯ್, ನಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.