ವಿಜಯಪುರ: ರಾಜ್ಯದ ಪ್ರತಿಷ್ಠಿತ ಕಣವಾಗಿದ್ದ ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿ ಸಚಿವ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲ ಗೆಲವು ಸಾಧಿಸಿದ್ದಾರೆ. ಸತತ ಮೂರನೇ ಬಾರಿಗೆ ಅವರು ಗೆಲುವಿನ ನಗೆ ಬೀರಿದ್ದಾರೆ.
ಧರ್ಮ ರಾಜಕಾರಣ, ತೀವ್ರ ಜಿದ್ದಾಜಿದ್ದಿನಿಂದ ಕೂಡಿ ರಾಜ್ಯದ ಗಮನ ಸೆಳೆದಿತ್ತು. ಈ ಮೊದಲು ತಿಕೋಟ ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಗೆದ್ದಿದ್ದರು. ಎಂ.ಬಿ.ಪಾಟೀಲ ವಿರುದ್ಧ ಬಿಜೆಪಿಯ ವಿಜುಗೌಡ ಪಾಟೀಲ ತೀವ್ರ ಸ್ಪರ್ಧೆವೊಡ್ಡಿದ್ದರು. ಸಚಿವರ ಗೆಲುವು ಪ್ರಕಟಿಸುತ್ತಿದ್ದಂತೆ ಕ್ಷೇತ್ರದಲ್ಲಿ ವ್ಯಾಪಕ ಅವ್ಯವಹಾರ, ಗೋಲಮಾಲ್ ನಡೆದಿದೆ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಥಳೀಯವಾಗಿ ರಾಜಕೀಯ ಸೋಲು ಗೆಲುವಿನ ಮೇಲೆ ಭಾರಿ ಪ್ರಭಾವ ಹೊಂದಿರುವ ಬಬಲೇಶ್ವರ ಮಠದ ಅಸಮಾಧಾನ ಕಟ್ಟಿಕೊಂಡು ಅವರು ಗೆಲುವು ಸಾಧಿಸಿ ಬೀಗಿದ್ದಾರೆ. ಅತ್ಯಂತ ಹಿಂದುಳಿದ ಕ್ಷೇತ್ರವಾದ ಬಬಲೇಶ್ವರದಲ್ಲಿ ನೀರಾವರಿಗೆ ಆದ್ಯತೆ, ಕುಡಿಯುವ ನೀರು, ಕೆರೆ ತುಂಬಿಸುವ ಕೆಲಸ ಮಾಡಿದ್ದು ಮತದಾರರು ಅವರನ್ನು ಕೈ ಬಿಡದಿರಲು ಕಾರಣವಾಗಿದೆ.
ಪಂಚಪೀಠದ ಸ್ವಾಮೀಜಿ, ಕ್ಷೇತ್ರದ ಗುರುವರ್ಗ ಮಠದ ಸ್ವಾಮೀಜಿ ಸೇರಿ ಹಲವು ವೀರಶೈವ ಪ್ರಭಾವಿ ಮುಖಂಡರು ಎಂ.ಬಿ.ಪಾಟೀಲ ಸೋಲಿಗೆ ತೀವ್ರವಾದ ಕಸರತ್ತು ನಡೆಸಿದ್ದರು. ಪಾಟೀಲ ಸೋಲಿಗೆ ಯಡಿಯೂರಪ್ಪ ಟೊಂಕಕಟ್ಟಿ ನಿಂತಿದ್ದರು. ಇದೆಲ್ಲವನ್ನೂ ಅವರು ಅತ್ಯಂತ ಸುಲಭವಾಗಿ ನಿವಾರಿಸಿಕೊಂಡು ಜಯದ ದಡ ಮುಟ್ಟಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.