ಕಲಬುರ್ಗಿ: ‘ನಮ್ಮ ತಂದೆ ಸೇರಿದಂತೆ ಇಡೀ ಕುಟುಂಬವು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೇರೆ ಬೇರೆ ಸಂದರ್ಭದಲ್ಲಿ ನೆರವು ನೀಡಿದೆ. ಸಹಾಯ ಮಾಡಿಲ್ಲವೆಂದಾದರೆ, ಅವರು ಬುದ್ಧವಿಹಾರದ ಮೇಲೆ ಆಣೆ ಮಾಡಲಿ’ ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಸವಾಲು ಹಾಕಿದರು.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ‘ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವ ಸ್ಥಾನ ಕಲ್ಪಿಸುವಂತೆ ಕೋರಿ ಖರ್ಗೆ ಹಲವು ಬಾರಿ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಬಂಗಾರಪ್ಪ ಅವರಿಗೆ ಆಪ್ತರಾಗಿದ್ದ ನಮ್ಮ ತಂದೆಯವರು ಯಾವುದೇ ಫಲಾಪೇಕ್ಷೆ ಬಯಸದೇ ಅವರಿಗೆ ಸಚಿವ ಸ್ಥಾನ ದೊರೆಯುವಂತೆ ಮಾಡಿದರು’ ಎಂದು ಹೇಳಿದರು.
‘ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಕಾರಣಕ್ಕೆ, ನಾನು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಿದ್ದಾರೆ. ಆದರೆ, ಅಫಜಲಪುರ ಕ್ಷೇತ್ರದ ಜನರ ಬಗ್ಗೆ ನನಗೆ ಅಪಾರ ವಿಶ್ವಾಸವಿದ್ದು, ಗೆಲುವು ಸಾಧಿಸುತ್ತೇನೆ’ ಎಂದರು.
‘ಪ್ರಿಯಾಂಕ್ ಅವರಿಗೆ ಇನ್ನೂ ಮೆದುಳು ಬೆಳೆದಿಲ್ಲ. ಯಾವುದೇ ಆರೋಪಗಳಿದ್ದರೂ ಅದಕ್ಕೆ ಉತ್ತರಿಸಲು ಸಿದ್ಧ. ಅದಕ್ಕಾಗಿ ಬಹಿರಂಗ ಸಭೆ ಬೇಕಾದರೂ ಕರೆಯಲಿ’ ಎಂದು ಸವಾಲು ಹಾಕಿದರು.
ನನ್ನ ಜೀವನ ಬಿಳಿ ಹಾಳೆಯಿದ್ದಂತೆ. ಅದರಲ್ಲಿ ಯಾವುದೇ ಕಳಂಕವಿಲ್ಲ. ಯಾವುದೇ ದೂರು ಅಥವಾ ಆರೋಪಗಳಿದ್ದರೂ ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ.
–ಮಾಲೀಕಯ್ಯ ಗುತ್ತೇದಾರ, ಬಿಜೆಪಿ ನಾಯಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.