ADVERTISEMENT

ಪಕೋಡ ಮಾಡುವವರಿಗೆ ಸಾಲ ಸೌಲಭ್ಯ: ಅಮಿತ್ ಶಾ

ಬಿಜೆಪಿಗೆ ಸಾಮಾನ್ಯ ವ್ಯಕ್ತಿಗಳೇ ಮುಖ್ಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 13:51 IST
Last Updated 19 ಏಪ್ರಿಲ್ 2018, 13:51 IST
ಪಕೋಡ ಮಾಡುವವರಿಗೆ ಸಾಲ ಸೌಲಭ್ಯ: ಅಮಿತ್ ಶಾ
ಪಕೋಡ ಮಾಡುವವರಿಗೆ ಸಾಲ ಸೌಲಭ್ಯ: ಅಮಿತ್ ಶಾ   

ಬೆಂಗಳೂರು: ಬಿಜೆಪಿಗೆ ಸಾಮಾನ್ಯ ವ್ಯಕ್ತಿಗಳ ಉದ್ಯೋಗವೇ ಮಹತ್ವದ್ದು. ಅದಕ್ಕಾಗಿಯೇ ಪಕೋಡ ಮಾಡುವವರಿಗೆ ಸಾಲ ಸೌಲಭ್ಯ ನೀಡುತ್ತೇವೆ ಎಂದು ಅಮಿತ್ ಶಾ ಹೇಳಿದರು.

ನಗರದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಕೋಡ ಮಾಡುವವರ ಜೊತೆಗೆ ಭಿಕ್ಷುಕರಿಗೂ ಸಾಲ ಕೊಡಿ ಎಂದು ಪಿ.ಚಿದಂಬರಂ‌ ಹಾಸ್ಯ ಮಾಡಿದ್ದರು. ಸ್ವಾಭಿಮಾನದಿಂದ ಪಕೋಡಾ ಮಾಡುವ ಉದ್ಯೋಗ ಯಾವ ಟಾಟಾ ಬಿರ್ಲಾ, ಅಂಬಾನಿ ಅವರ ಉದ್ಯೋಗಕ್ಕಿಂತ ಕಡಿಮೆಯಿಲ್ಲ ಎಂದು ಟೀಕಿಸಿದರು.

ADVERTISEMENT

ಚಿದಂಬರಂಗೆ ಸಾಮಾನ್ಯ ವ್ಯಕ್ತಿಯ ಉದ್ಯೋಗ ಮಹತ್ವ ಎನಿಸಲೇ ಇಲ್ಲ. ಆಟೋ ಚಾಲಕರು, ಕ್ಷೌರಿಕರೂ ಗೌರವದಿಂದ ಬದುಕಬೇಕು ಎಂಬುದು ಬಿಜೆಪಿ ಸರ್ಕಾರ ಆಶಯ. ಅದರಂತೆ ನಡೆಯುತ್ತಿದ್ದೇವೆ ಎಂದರು.

ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಅಲ್ಪಸಂಖ್ಯಾತರ, ಹಿಂದುಳಿದವರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅವರ ಯಾರ ಬಳಿಯಾದರೂ 14 ಲಕ್ಷ ಮೌಲ್ಯದ ಗಡಿಯಾರ ಇದೆಯಾ? ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ನಮಗೆ ಬಲಗೈಯಲ್ಲಿ ಭ್ರಷ್ಟಾಚಾರದ ಪಟ್ಟಿ ಕೇಳುತ್ತಿದ್ದಾರೆ. ಅದಕ್ಕೆ ಅವರ ಎಡಗೈ ಮಣಿಕಟ್ಟಿನಲ್ಲೇ ಉತ್ತರ ಇದೆ ಎಂದರು.

ಕುವೆಂಪು, ವಿಶ್ವೇಶ್ವರಯ್ಯ, ದ.ರಾ.ಬೇಂದ್ರೆ ಹೀಗೆ ಕನ್ನಡದ ಯಾವೊಬ್ಬರ ಜಯಂತಿ ಮಾಡಬೇಕೆಂದು ಅನಿಸದ ಸಿದ್ದರಾಮಯ್ಯಗೆ ಟಿಪ್ಪು ಜಯಂತಿ ಮಾತ್ರ ನೆನಪಾಗುತ್ತದೆ ಎಂದು ಹೇಳಿದರು.

ಅಭಿವೃದ್ಧಿಯ ರೈಲಿಗೆ ಕೇಂದ್ರದಲ್ಲಿ ಮೋದಿಯೆಂಬ ಒಂದು ಎಂಜಿನ್ ಜೋಡಿಸಲಾಗಿದೆ‌. ಅದಕ್ಕೆ ಕರ್ನಾಟಕದಲ್ಲಿ ಯಡಿಯೂರಪ್ಪ ಎಂಬ ಎರಡನೇ ಎಂಜಿನ್ ಜೋಡಿಸಿ ಅದರ ವೇಗ ಹೆಚ್ಚಿಸಿ ಎಂದು ಕೋರಿದರು.

ಬೆಂಗಳೂರಿನಲ್ಲಿ ಕನಿಷ್ಠ 18 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಜತೆಗೆ ರಾಜ್ಯದಲ್ಲೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.