ADVERTISEMENT

‘ಪ್ರಶಸ್ತಿ ಪತ್ರ, ಹಣ ವಾಪಸ್ ಮಾಡಲು ಸಿದ್ಧರಾಗಿ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
‘ಪ್ರಶಸ್ತಿ ಪತ್ರ, ಹಣ ವಾಪಸ್ ಮಾಡಲು ಸಿದ್ಧರಾಗಿ’
‘ಪ್ರಶಸ್ತಿ ಪತ್ರ, ಹಣ ವಾಪಸ್ ಮಾಡಲು ಸಿದ್ಧರಾಗಿ’   

ಹೊನ್ನಾವರ (ಉತ್ತರ ಕನ್ನಡ): ‘ರಾಜ್ಯದಲ್ಲಿ ಹಿಂದೂಗಳಿಗೆ ಮಾತ್ರ ಸರ್ಕಾರ ಭದ್ರತೆ ಒದಗಿಸುತ್ತಿಲ್ಲ. ಪರೇಶ ಮೇಸ್ತ ಮತ್ತು ಇತರ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಗೌರಿ ಸಂತಾನ ಏಕೆ ದನಿ ಎತ್ತಲಿಲ್ಲ? ಮುಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಎಡಬಿಡಂಗಿ ಬುದ್ಧಿಜೀವಿಗಳು ಪ್ರಶಸ್ತಿಪತ್ರ ಹಾಗೂ ಹಣ ವಾಪಸ್ ಮಾಡಲು ಸಿದ್ಧರಾಗಿರಿ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಲೇವಡಿ ಮಾಡಿದರು.

ಬಿಜೆಪಿಯ ಜನಸುರಕ್ಷಾ ಯಾತ್ರೆಯ ಅಂಗವಾಗಿ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಫಿ ಹೀರುತ್ತಾ, ಟಿ.ವಿ ಮುಂದೆ ಕುಳಿತು ಸಿದ್ದರಾಮಯ್ಯ ಈ ಮಾತು ಕೇಳಿಸಿಕೊಳ್ಳುತ್ತಿರಬೇಕು. ಸರಿಯಾಗಿ ಕೇಳಿಸಿಕೊಳ್ಳಿ; ನಮ್ಮ ಜತೆ ಚರ್ಚಿಸಲು ನೀವು ಕರಾವಳಿಗೆ ಬನ್ನಿ. ಇಲ್ಲದಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಚರ್ಚೆಗೆ ನಾವು ಸಿದ್ಧರಿದ್ದೇವೆ’ ಎಂದು ಸವಾಲು ಹಾಕಿದರು.

ADVERTISEMENT

ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ನಾನು ಗೌರಿ ಎಂದು ಬೊಬ್ಬಿಡುವವರು ನಾನು ಪರೇಶ ಎಂದು ಏಕೆ ಹೇಳುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಪಾತಕ ಸರ್ಕಾರ; ಪಾಪಿ ಮುಖ್ಯಮಂತ್ರಿ’

ಯಾತ್ರೆ ಅಂಗವಾಗಿ ಭಟ್ಕಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಗಡೆ, ನಾವೇ ಆರಿಸಿ ಕಳುಹಿಸಿದ ಸರ್ಕಾರದಿಂದ ನಮಗೆ ನಾವೇ ರಕ್ಷಣೆ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ’ ಎಂದು ದೂರಿದರು.

‘ಇಂದು ಮನೆಯಿಂದ ಹೊರಗೆ ಹೋದ ಮಗ ಹಿಂತಿರುಗಿ ಬರುತ್ತಾನೆಂಬ ನಂಬಿಕೆ ಇಲ್ಲ. ಎಲ್ಲೋ ಕೊಲೆಯಾಗಿ ಬಿದ್ದಿರುತ್ತಾನೆ. ಮಗಳು ಯಾರದೋ ಲವ್ ಜಿಹಾದ್‌ಗೆ ಗುರಿಯಾಗಿರುತ್ತಾಳೆ. ಆರೋಪಿಗಳೆಲ್ಲಾ ಸಿದ್ದರಾಮಯ್ಯನ ಪಕ್ಕದಲ್ಲೇ ನಿಂತುಕೊಂಡಿರುತ್ತಾರೆ. ಇದು ಸಿದ್ದಣ್ಣನ ಸರ್ಕಾರ. ಪಾತಕ ಸರ್ಕಾರ; ಪಾಪಿ ಮುಖ್ಯಮಂತ್ರಿ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.