ಬಾಗಲಕೋಟೆ: ಬಾದಾಮಿಯಲ್ಲಿ ವಾಸ್ತವ್ಯ ಹೂಡಲು, ಶಾಸಕ ಸಿದ್ದರಾಮಯ್ಯ ಅವರಿಗೆ ಉಚಿತವಾಗಿ ಮನೆ ನೀಡಲು ಬೆಂಬಲಿಗರಿಬ್ಬರು ಮುಂದೆ ಬಂದಿದ್ದಾರೆ.
ಬಾದಾಮಿ ಪಟ್ಟಣದ ಗುತ್ತಿಗೆದಾರ ಶಂಕರಗೌಡ ಕೆಳಗಿನಮನಿ ಮೊದಲು ಆಫರ್ ಕೊಟ್ಟಿದ್ದಾರೆ. ಅಲ್ಲಿನ ಜಯನಗರದಲ್ಲಿರುವ ಶಂಕರಗೌಡ ಅವರ ಸುಸಜ್ಜಿತ ಮನೆ ಎರಡು ಬೆಡ್ರೂಂ, ಡೈನಿಂಗ್ ಹಾಲ್, ಕಚೇರಿ, ಪೂಜಾ ಕೊಠಡಿ ಹಾಗೂ ಕಾರ್ಪಾರ್ಕಿಂಗ್ ಸೌಲಭ್ಯ ಹೊಂದಿದೆ. ಜೊತೆಗೆ 186x150 ಅಳತೆಯ ವಿಶಾಲವಾದ ಹೊರಾಂಗಣವೂ ಇದೆ. ಜೂನ್ 11ರಂದು ಬಾದಾಮಿಗೆ ಬಂದಿದ್ದ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ಈ ಮನೆ ನೋಡಿಕೊಂಡು ಹೋಗಿದ್ದಾರೆ.
‘ನಾನು ವೈಯಕ್ತಿಕವಾಗಿ ಸಿದ್ದರಾಮಯ್ಯ ಅಭಿಮಾನಿ. ಬಾದಾಮಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ನೂತನ ಶಾಸಕರು ಹೇಳಿದ್ದಾರೆ. ಹಾಗಾಗಿ ಅವರ ವಾಸ್ತವ್ಯಕ್ಕೆ ಉಚಿತವಾಗಿಯೇ ಮನೆ ಕೊಡಲು ಮುಂದಾಗಿದ್ದೇನೆ’ ಎಂದು ಶಂಕರಗೌಡ ತಿಳಿಸಿದ್ದಾರೆ.
ಬಾದಾಮಿಯ ಕಾಂಗ್ರೆಸ್ ಮುಖಂಡ ಮಹೇಶ ಹೊಸಗೌಡ್ರ ಕೂಡ, ಬಾಡಿಗೆ ಪಡೆಯದೇ ತಮ್ಮ ಮನೆಯನ್ನು ಸಿದ್ದರಾಮಯ್ಯ ಅವರಿಗೆ ಕೊಡಲು ಮುಂದಾಗಿದ್ದಾರೆ. ಈ ಮನೆಯನ್ನೂ ಡಾ.ಯತೀಂದ್ರ ನೋಡಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಒಂದು ವಾರ ಕ್ಷೇತ್ರದಲ್ಲಿ ಇದ್ದ ಶಾಸಕ ಸಿದ್ದರಾಮಯ್ಯ, ಇಲ್ಲಿನ, ವಿಜಯನಗರ ಶಾಸಕ ಆನಂದ ಸಿಂಗ್ ಒಡೆತನದ ಕೃಷ್ಣಾ ಹೆರಿಟೇಜ್ ರೆಸಾರ್ಟ್ನಲ್ಲಿ ತಂಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.